ವಿಟ್ಲ: ಇಲ್ಲಿನ ವಿದ್ಯಾನಗರ, ಪೆರಾಜೆ, ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಕ್ರೀಡಾಂಗಣದಲ್ಲಿ ಅಕ್ಟೋಬರ್ 6 ಮತ್ತು 7ರಂದು ನಡೆಯಲಿರುವ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಇಲಾಖಾ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭವನ್ನು ಅಕ್ಟೋಬರ್ 6 ರಂದು ನೆರವೇರಿಸಲಾಯಿತು.
ಕ್ರೀಡಾ ಜ್ಯೋತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ್ ಜೆ ಶೆಟ್ಟಿ ಇವರು “ಹೊಸ ಶಾಲೆಯ ಕ್ರೀಡಾಂಗಣದಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ವಲಯ ಮಟ್ಟದ ಕ್ರೀಡೋತ್ಸವದಲ್ಲಿ ಎಲ್ಲರೂ ಬಹಳ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಈ ನೂತನ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೂ ದೈವ- ದೇವರುಗಳ ಅನುಗ್ರಹ ದೊರೆಯಲಿ “ಎಂದು ಶುಭ ಹಾರೈಸಿದರು.
ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಯಂ.ಜಿ “ಬಾಲವಿಕಾಸ ಸಂಸ್ಥೆಯ ಮುಖ್ಯಸ್ಥ ಪ್ರಹ್ಲಾದ್ ಜೆ ಶೆಟ್ಟಿ ವಿದ್ಯಾಭಿಮಾನ ಹಾಗೂ ಕ್ರೀಡಾ ಪ್ರೇಮ ಶ್ಲಾಘನೀಯವಾದುದು ಎಂದರು. ವ್ಯಕ್ತಿತ್ವ ವಿಕಸನ ಮಾಡಬಲ್ಲ, ಹಿರಿಮೆ ಗರಿಮೆ ಒದಗಿಸಬಲ್ಲ, ನಾಯಕತ್ವ ಗುಣವನ್ನು ಬೆಳೆಸಬಲ್ಲ, ಶಿಸ್ತು ಹಾಗೂ ಸಂಯಮವನ್ನು ಬೆಳೆಸಬಲ್ಲ ಕಲಿಕಾ ವಿಧಾನವೆಂದರೆ ಅದು ಕ್ರೀಡೆ ” ಎಂದರು.
ಕ್ರೀಡೆಯ ಉದ್ಘಾಟಕ ಕರ್ನಾಟಕ ಪ್ರೌಢ ಶಾಲೆ ಮಾಣಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲಯನ್ ಗಂಗಾಧರ್ ರೈ ಇವರು ” ಬಾಲವಿಕಾಸ ಸಂಸ್ಥೆಯ ಸಂಚಾಲಕರು ದೈಹಿಕ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಕ್ರೀಡಾ ಅವಕಾಶಗಳನ್ನು ಕಲ್ಪಿಸಿ ಸಾಧನೆಗೆ ಮತ್ತು ಜೀವನಕ್ಕೆ ದಾರಿ ತೋರಿಸಿ ಕೊಟ್ಟವರು. ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಬಾಲವಿಕಾಸ ಸಂಸ್ಥೆಯಲ್ಲಿ ಕ್ರೀಡಾ ಕೂಟ ನೆರವೇರಿಸಲು ಅವಕಾಶ ಕಲ್ಪಿಸಿರುವುದು ಹೆಮ್ಮೆಯ ವಿಚಾರ “ಎಂದರು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್, ಶಿಕ್ಷಣ ಸಂಯೋಜಕಿ ಸುಜಾತ, ಮಾಣಿ ವಲಯ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್, ಕಡೆಶ್ವಾಲ್ಯ ವಲಯ ಸಂಪನ್ಮೂಲ ಅಧಿಕಾರಿ ಸುಧಾಕರ್, ಕರ್ನಾಟಕ ರಾಜ್ಯ ಸಹಶಿಕ್ಷಕ ಸಂಘದ ಉಪಾಧ್ಯಕ್ಷ ಹರಿಪ್ರಸಾದ್ ಶಂಭೂರು, ಕಲ್ಲಡ್ಕದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರ್, ಬಾಲವಿಕಾಸದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಉಪಸ್ಥಿತರಿದ್ದರು.
ಬಾಲವಿಕಾಸದ ಸಹಶಿಕ್ಷಕಿಯರಾದ ಸುಧಾ ಎನ್ ರಾವ್ ಮತ್ತು ಸುಪ್ರಿಯಾ ಡಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಅಧಿಕಾರಿ ರವೀಂದ್ರ ಡಿ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ವಂದಿಸಿದರು.