ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಮಧ್ಯೆ ಬ್ಲ್ಯಾಕ್ ಫಂಗಸ್ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಂಬಂಧ ಆರೋಗ್ಯ ಸಚಿವ ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರ ಸಭೆ ನಡೆಯಿತು.
ನೇತ್ರ ತಜ್ಞ ಭುಜಂಗಶೆಟ್ಟಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಬ್ಲ್ಯಾಕ್ ಫಂಗಸ್ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕೇಂದ್ರ ಸರ್ಕಾರ ಕಪ್ಪು ಶಿಲೀಂದ್ರಿ ಕಾಯಿಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದೆ. ಇದರ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಬ್ಲ್ಯಾಕ್ ಫಂಗಸ್ ಕೋವಿಡ್ನಷ್ಟು ಭೀಕರವಲ್ಲ. ಕೇಂದ್ರ ಸರ್ಕಾರದಿಂದ ಈ ಕಾಯಿಲೆ ಬಗ್ಗೆ ಕೆಲವು ಮಾರ್ಗಸೂಚಿ ನೀಡಲಾಗಿದೆ. ಕೆಲವು ರಾಜ್ಯದಲ್ಲಿ ಪ್ರೋಟೋಕಾಲ್ ಜಾರಿಯಲ್ಲಿದೆ. ಹೀಗಾಗಿ ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಯಾರಿಗೆ ಮಿತಿಮೀರಿದ ಮಧುಮೇಹ ಇರುತ್ತದೆಯೋ ಅವರಿಗೆ ಕೊರೋನಾ ಬಂದು ಅತಿಯಾದ ಸ್ಟಿರಾಯಿಡ್ಸ್ ಬಳಸಿದರೆ ಅವರಿಗೆ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೈ ಶುಗರ್ ಇರುವವರು ಸೋಂಕಿನಿಂದ ಗುಣಮುಖರಾದ ಬಳಿಕ ಕಂಟ್ರೋಲ್ನಲ್ಲಿ ಇರಬೇಕು. ಇಲ್ಲವಾದರೆ ಅತಿ ಬೇಗ ಸೆಕೆಂಡರಿ ಇನ್ಫೆಕ್ಷನ್ಗೆ ತುತ್ತಾಗುತ್ತಾರೆ. ಕ್ಯಾನ್ಸರ್ ಇರುವವರು, ಅಂಗಾಂಗ ಕಸಿ ಮಾಡಿಸಿಕೊಂಡಿರುವವರಿಗೆ, ಹೆಚ್ಐವಿ ಇನ್ಫೆಕ್ಷನ್ ಇರುವವರಿಗೂ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇದೆ ಎಂದರು. ಪ್ರಾರಂಭದಲ್ಲೇ ಮೂಗು, ಗಂಟಲು, ಕಿವಿಯನ್ನು ತೋರಿಸಿಕೊಳ್ಳಬೇಕು. ಎಲ್ಲಾ ವೈದ್ಯರು ಇಂಥಹ ವ್ಯಕ್ತಿಗಳನ್ನು ಗಮನಹರಿಸಿ ನೋಡಬೇಕು. ಇದು ನೋಟಿಫೈಡ್ ಡಿಸೀಸ್ ಅಗಿದ್ದು, ಇದನ್ನು ಖಾಸಗಿಯಾಗಿ ಇಟ್ಟಕೊಳ್ಳುವಂತಿಲ್ಲ. ಸರ್ಕಾರದ ಗಮನಕ್ಕೆ ತರಬೇಕು ಎಂದು ಸರ್ಕಾರ ಆದೇಶಿಸಿದೆ. ಟ್ಯಾಪ್ ನೀರು ಬಳಸುವುದರಿಂದ ಬ್ಲ್ಯಾಕ್ ಫಂಗಸ್ ಬರುತ್ತೆ ಅನ್ನೋ ಅನುಮಾನ ನಮಗೂ ಇದೆ. ಈ ಬಗ್ಗೆ ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದ್ದೇವೆ. ಇನ್ನು ಬ್ಲ್ಯಾಕ್ ಫಂಗಸ್ ಕಾಯಿಲೆ ಗಾಳಿಯಲ್ಲಿ ಹರಡುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಇಲ್ಲಿವರೆಗೆ 97 ಜನರಿಗೆ ಬ್ಲ್ಯಾಕ್ ಫಂಗಸ್ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಈವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಬೆಂಗಳೂರಿನವರಾದರೆ, ಒಬ್ಬರು ಕೋಲಾರ ಜಿಲ್ಲೆಯವರು. ಇನ್ನು ಬೆಂಗಳೂರು ಹೊರತುಪಡಿಸಿ ಮೈಸೂರು ಮೆಡಿಕಲ್ ಕಾಲೇಜು, ಶಿವಮೊಗ್ಗ ಮೆಡಿಕಲ್ , ಜಿಮ್ಸ್, ಕಿಮ್ಸ್, ಕೆಎಂಸಿ ಹಾಗೂ ವೆನ್ಲಾಕ್ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.
ಚಿಕಿತ್ಸೆಗಾಗಿ 40-60 ವಯಲ್ಸ್ ಬೇಕಿದೆ. ನಮಗೆ 1,050 ರಷ್ಟು ವಯಲ್ಸ್ ನೀಡಲು ಕೇಂದ್ರದಿಂದ ಮಂಜೂರಾತಿ ಆಗಿದೆ. ಐಸೋಕೋನೋಸೋಲ್, ಫೋಸೋಕೋನೋಸೋಲ್ ಗೆ 20 ಸಾವಿರ ವಯಲ್ಸ್ಗೆ ನಾವು ಬೇಡಿಕೆ ಇಟ್ಟಿದ್ದೇವೆ. ಇನ್ಮುಂದೆ ಡಾಕ್ಟರ್ ಹೇಳದೆ ಸ್ಟಿರಾಯಿಡ್ಸ್ಗಳನ್ನು ಯಾರೂ ನೀಡುವಂತಿಲ್ಲ. ಬಿಬಿಎಂಪಿ ಕೊಟ್ಟಿರೋದು ನಮಗೆ ಗೊತ್ತಿಲ್ಲ. ಈ ಬಗ್ಗೆ ನಾನು ಆಯುಕ್ತರ ಜೊತೆ ಮಾತನಾಡುತ್ತೇನೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದರು. ಜೊತೆಗೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ರಾಜ್ಯ ಜನರಲ್ಲಿ ಮನವಿ ಮಾಡಿಕೊಂಡರು.