ಬಂಟ್ವಾಳ: ಬಂಟ್ವಾಳದ ಮೂಲದ ವ್ಯಕ್ತಿಯೋರ್ವರನ್ನು ಪೆಟ್ರೋಲ್ ಸುರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ನಿವಾಸಿ ಅಬ್ಬಾಸ್ ಅವರ ಪುತ್ರ ಫವಾಜ್(35) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆಯ ಹಿಂದೆ ಗಾಂಜಾ ವಹಿವಾಟು ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಫವಾಜ್ ಎಂಬಾತನನ್ನು ಆರೋಪಿಗಳು ಪೆಟ್ರೋಲ್ ಸುರಿದು ಕೊಲೆ ಮಾಡಿದ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಫಯಾಜ್ ಅವರು ಮದುವೆಯಾಗಿದ್ದು, ಬಳಿಕ ಪತ್ನಿಯಿಂದ ದೂರವಿದ್ದರು. ಈತ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದಲ್ಲದೆ, ಗಾಂಜಾ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ.
ಒಳ್ಳೆಯ ಕುಟುಂಬದ ಯುವಕನಾಗಿದ್ದ ಈತನ ಕೆಟ್ಟ ಬುದ್ದಿಯಿಂದ ಬೇಸೆತ್ತ ಮನೆಯವರು ಇವನನ್ನು ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ. ಗಾಂಜಾ ವಹಿವಾಟು ಜೋರಾಗಿ ನಡೆಸುತ್ತಿದ್ದ ಈತನಿಗೆ ಗಾಂಜಾ ಪೆಡ್ಲರ್ ಗಳ ಜೊತೆ ಅತಿಯಾದ ಸಂಪರ್ಕವಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರೊಳಗೆ ಹಣಕಾಸಿನ ಅಥವಾ ಗಾಂಜಾ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಈತನನ್ನು ಸುಮಾರು ಹತ್ತು ದಿನಗಳ ಹಿಂದೆ ಇರಾದಿಂದ ಕಿಡ್ನಾಪ್ ಮಾಡಿದ್ದರು.
ಬಳಿಕ ಯಾವುದೋ ಅಜ್ಞಾತ ಸ್ಥಳದಲ್ಲಿ ಈತನನ್ನು ಕೂಡಿ ಇಟ್ಟು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಬಣಕ್ಕಲ್ ಎಂಬಲ್ಲಿ ಗುಡ್ಡದಲ್ಲಿ ಬಿಸಾಡಿದ್ದಾರೆ. ವಗ್ಗ ಅಥವಾ ಕಾವಳಕಟ್ಟೆ ಮೂಲದ ಯುವಕರು ಈತನ ಕೊಲೆಯ ಹಿಂದೆ ಇರುವ ಆರೋಪಿಗಳು ಎಂಬ ಮಾಹಿತಿ ಪೋಲೀಸ್ ಇಲಾಖೆ ಲಭ್ಯವಾಗಿದೆ. ಗಾಂಜಾ ವ್ಯಸನಿ ಸ್ನೇಹಿತರಿಗೆ ಈತನ ಕಿಡ್ನಾಪ್ ಬಗ್ಗೆ ಮಾಹಿತಿ ಇತ್ತು ಎನ್ನಲಾಗಿದ್ದು, ಸ್ನೇಹಿತರೇ ಈತನ ಕೊಲೆ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು ಆರೋಪಿಗಳ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.