ಬಂಟ್ವಾಳ: ಕಾರಿನಲ್ಲಿ ಬರುತ್ತಿದ್ದ ಹೆಂಗಸರನ್ನು ಚುಡಾಯಿಸಿದ ವಿಚಾರವಾಗಿ ಪ್ರಶ್ನಿಸಲು ಹೋದ ಯುವಕನನ್ನು ಅವಾಚ್ಯ ಶಬ್ದಗಳಿಂದ ಬೈದು, ಬಳಿಕ ಕಾರಿಗೆ ಡಿಕ್ಕಿ ಹೊಡೆದು ಕಾರಿಗೆ ಹಾನಿ ಮಾಡಿದ ಘಟನೆಗೆ ಸಂಬಂಧಿಸಿದ ದೂರು-ಪ್ರತೀ ದೂರು ದಾಖಲಾದ ಘಟನೆ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕನೋರ್ವ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಗೋಳ್ತಮಜಲು ಕೆ ಸಿ ರೋಡ್ ಮಾರ್ಗದಲ್ಲಿ ಚಲಿಸುತ್ತಿದ್ದ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರು ಚಾಲಕ ತನ್ನ ಕಾರಿನಲ್ಲಿದ್ದ ಹೆಂಗಸರನ್ನು ಚುಡಾಯಿಸಿರುತ್ತಾರೆ. ಈ ವಿಚಾರವಾಗಿ ಕಾರಿನಲ್ಲಿದ್ದ ಯುವಕ ಹಿಂಬದಿ ಕಾರಿನ ಚಾಲಕನನ್ನು ವಿಚಾರಿಸಿದಾಗ ಕಾರಿನ ಚಾಲಕ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಅಲ್ಲದೆ, ಕಾರನ್ನು ಸ್ವಲ್ಪ ಮುಂದೆ ಚಲಾಯಿಸಿದಾಗ ತನ್ನ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಅಪಘಾತದ ಪರಿಣಾಮ ಕಾರಿನ ಹಿಂಭಾಗ ಜಖಂ ಆಗಿರುತ್ತದೆ. ಈ ವೇಳೆ ಯುವಕ ಹಾಗೂ ಹಿಂಬದಿ ಕಾರನ್ನು ನಿಲ್ಲಿಸಿ ವಿಚಾರಿಸಿದಾಗ ತನ್ನ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿ, ಕಾರಿನಲ್ಲಿದ್ದ ಯುವಕನಿಗೆ ಹಲ್ಲೆ ನಡೆಸಿರುತ್ತಾರೆ. ಅಲ್ಲದೆ ತಾಯಿಯ ಚಿನ್ನದ ಸರವನ್ನು ಎಗರಿಸಿರುವುದಲ್ಲದೇ ಜೀವಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಪ್ರತಿದೂರಿನಂತೆ ತನ್ನ ಕಾರಿನಲ್ಲಿ ಪತ್ನಿಯೊಂದಿಗೆ, ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ನರಹರಿ ಪರ್ವತದ ಬಳಿ ಪ್ರಯಾಣಿಸುತ್ತಿದ್ದಾಗ, ಹಿಂದಿನಿಂದ ಬಂದ ಕಾರಿನ ಚಾಲಕ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ತನ್ನ ಕಾರಿನ ಮಿರರ್ ಗೆ ಹಾನಿಗೊಳಿಸಿರುತ್ತಾನೆ. ಈ ಬಗ್ಗೆ ಕಾರಿನ ಚಾಲಕನಲ್ಲಿ ಕೈ ಸನ್ನೆಯಲ್ಲಿ ಕೇಳಿ, ಮುಂದಕ್ಕೆ ಚಲಾಯಿಸಿಕೊಂಡು ಹೋಗುತ್ತಿರುವ, ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ, ಕೆ ಸಿ ರೋಡಿನ ನಯಾರಾ ಪೆಟ್ರೋಲ್ ಪಂಪ್ ಬಳಿ ತಲುಪಿದಾಗ, ಕಾರಿನ ಚಾಲಕ ತನ್ನನ್ನು ತಡೆದು, ಕಾರಿನಲ್ಲಿದ್ದ 4 ಜನರು ಬೈದು, ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಾಗೂ ಕನ್ನಡಕವನ್ನು ಎಳೆದು ತೆಗೆದುಕೊಂಡಿರುತ್ತಾರೆ. ತನ್ನ ಪತ್ನಿಗೂ ಅವ್ಯಾಚವಾಗಿ ಬೈದು, ಅನುಚಿತವಾಗಿ ವರ್ತಿಸಿರುತ್ತಾರೆ. ಆಗ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಆರೋಪಿಗಳನ್ನು ತಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಹಾಗು ಅವರ ಪತ್ನಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದ ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.