

ಬಂಟ್ವಾಳ: ವ್ಯಕ್ತಿಯೋರ್ವರನ್ನು ಕ್ಷುಲ್ಲಕ ಕಾರಣಕ್ಕೆ ಬೈದು ಜಾತಿ ನಿಂದನೆ ಮಾಡಿ ಹಲ್ಲೆ ಗೈದು ಬೆದರಿಕೆಯೊಡ್ಡಿರುವ ಘಟನೆ ಕಕ್ಕೆಪದವು ಉಳಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವನ್ ಎಂಬವರು ನೀಡಿದ ದೂರಿನಂತೆ ತಮ್ಮ ಮನೆಯ ಪಕ್ಕ ವಾಸವಿರುವ ಚಂದ್ರ ಶೇಖರ ಹಾಗೂ ಅವರ ಪತ್ನಿ ಸೇಸಮ್ಮ ಹಾಗೂ ಅವರ ಮಗ ದೀಪಕ್ ಎಂಬವರು ನೆರೆಮನೆಯ ಸೌಮ್ಯ ಎಂಬವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದು, ಗಲಾಟೆಯ ಶಬ್ಧ ಕೇಳಿದಾಗ ಪವನ್ ಸೌಮ್ಯ ರವರ ಮನೆ ಸಮೀಪ ಹೋಗಿರುತ್ತಾರೆ. ಈ ವೇಳೆ ದೀಪಕ್ ಎಂಬಾತನು ಪವನ್ನನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಏಕಾಏಕಿ ಆತನ ಕೈಯಲ್ಲಿದ್ದ ಕೋಲಿನಿಂದ ಮುಖಕ್ಕೆ ಹೊಡೆದು ಹಲ್ಲೆ ನಡೆಸಿರುತ್ತಾನೆ. ಪರಿಣಾಮ ಪವನ್ ನೋವಿನಿಂದ ಜೋರಾಗಿ ಬೊಬ್ಬೆ ಹೊಡೆದಾಗ ದೀಪಕ್ ನ ತಂದೆ ಚಂದ್ರಶೇಖರ ಹಾಗೂ ಅವರ ಮನೆಗೆ ಬಂದಿದ್ದ ನೆಂಟರೊಬ್ಬರು ಅಲ್ಲಿಗೆ ಬಂದು ಪವನ್ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುತ್ತಾರೆ. ನಂತರ ಇವರೆಲ್ಲರೂ ಸೇರಿ ಪವನ್ ಎಂಬವರನ್ನು ಉದ್ದೇಶಿಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.