ಬಂಟ್ವಾಳ: ಕೊಳ್ನಾಡು ಗ್ರಾಮದ ನಾರ್ಶ ನಿವಾಸಿ ಮುತ್ತಲಿಬ್ ಎಂಬವರು ದುಬೈಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಕಳೆದ ಹಲವಾರು ದಿನಗಳಿಂದ ಮುತ್ತಲಿಬ್ ರವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಅವರ ಸಂಪರ್ಕ ಯಾರಿಗೂ ಸಿಗದೇ ಇದ್ದಿದ್ದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು. ಇದೀಗ ಮುತ್ತಲಿಬ್ ಮೃತಪಟ್ಟಿರುವುದಾಗಿ ಅಲ್ಲಿನ ಪೊಲೀಸರು ಖಚಿತಪಡಿಸಿದ್ದಾರೆ.
ಮುತ್ತಲಿಬ್ ರವರ ಮೃತದೇಹ ಮಾ.7 ರಂದು ದುಬೈ ಅಲ್-ರಫಾ ದಲ್ಲಿ ಪತ್ತೆಯಾಗಿತ್ತು. ಅಲ್ಲಿನ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮುತ್ತಲಿಬ್ ಅವರ ಪಾಸ್ಪೋರ್ಟ್ ನಂಬರ್ ಆಧಾರದಲ್ಲಿ ಭಾರತೀಯ ಪ್ರಜೆ ಎಂದು ಖಚಿತಪಡಿಸಿಕೊಂಡ ದುಬೈ ಪೊಲೀಸರು ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು.
ಮೃತದೇಹ ಪತ್ತೆಗೆ ಕರ್ನಾಟಕ ಕಲ್ಚರಲ್ ಪೋರಂ (ಕೆಸಿಎಫ್) ಸಹಕಾರ ನೀಡಿತ್ತು. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ತಹಶೀಲ್ದಾರ್ ಮೂಲಕ ವಿಳಾಸವನ್ನು ಪತ್ತೆ ಹಚ್ಚಲಾಯಿತು. ಇದೀಗ ಮೃತದೇಹ ದುಬೈ ರಾಶೀದ್ ಆಸ್ಪ್ರತೆಯಲ್ಲಿದೆ. ಕೆಸಿಎಫ್ ನಾಯಕರು ಮತ್ತು ಕಾರ್ಯಕರ್ತರು ಮುಂದಿನ ಕಾರ್ಯಗಳಿಗೆ ಸಹಕರಿಸುತ್ತಿದ್ದಾರೆ.
ಮುತ್ತಲಿಬ್ ನಾರ್ಶದ ಸೂಫಿ ಮುಕ್ರೀಕರ ಪುತ್ರನಾಗಿದ್ದು, ಈ ಹಿಂದೆ ಧಾರ್ಮಿಕ ಗುರುವಾಗಿ ಕೆಲಸ ಮಾಡಿದ್ದರು. ಬಳಿಕ ಇಂಜಿನೀಯರಿಂಗ್ ಪದವಿ ಪಡೆದು, ದುಬೈಗೆ ಕೆಲಸಕ್ಕೆ ತೆರಳಿದ್ದರು.
ಮುತ್ತಲಿಬ್ ನಾರ್ಶ ಅಂಕಣ ಬರಹಗಾರರಾಗಿದ್ದರು. ವಿಜಯಕಿರಣ, ಮದರಂಗಿ ಪತ್ರಿಕೆಗೆ ಅಂಕಣ ಬರೆದು ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಇವರ ನಿಗೂಢ ಮೃತ್ಯುವಿಗೆ ಕಾರಣ ತಿಳಿದುಬಂದಿಲ್ಲ. ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.