ಬಂಟ್ವಾಳ, ಅ.31: ತಾಲೂಕಿನ ಕಲ್ಲಡ್ಕ ಪರಿಸರದಲ್ಲಿ ಅನಾಥವಾಗಿ ಕೆಲವು ದಿನಗಳಿಂದ ಸುತ್ತಾಡುತ್ತಿದ್ದ ಗಂಡು ಕರುವನ್ನು ರಕ್ಷಣೆ ಮಾಡಿ ಪಿಕಪ್ ವಾಹನದಲ್ಲಿ ಗೋ ಶಾಲೆಗೆ ಸಾಗಿಸಲು ಮುಂದಾದ ಘಟನೆಯನ್ನು ತಿರುಚಿ ವರದಿ ಮಾಡುವ ಮೂಲಕ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗಿದೆ. ಇದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೋ ಪ್ರಮುಖ್ ಸರಪಾಡಿ ಅಶೋಕ್ ಅವರು ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಕಲ್ಲಡ್ಕದಲ್ಲಿ ನವೀನ್ ಕುದ್ರೆಬೆಟ್ಟು ಮತ್ತು ಮಾಧವ ಸುಧೆಕ್ಕಾರು ಎಂಬವರು ಬಿಡಾಡಿ ದನ ಎಂದು ಕರುವನ್ನು ರಕ್ಷಣೆಗೆ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ಅದು ತನಗೆ ಸೇರಿದ ಕರು ಎಂದಿದ್ದಾರೆ. ಸ್ಥಳದಲ್ಲಿ ಜನ ಸೇರಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಕರುವಿನ ಮಾಲಕ ಮತ್ತು ರಕ್ಷಣೆ ಮುಂದಾದವರನ್ನು ಠಾಣೆಗೆ ಕರೆದುಕೊಂಡು ಹೋಗಿ ಸಮಸ್ಯೆಯನ್ನು ಇತ್ಯರ್ಥ ಮಾಡಿದ್ದಾರೆ ಎಂದರು.
ಆದರೆ ಬಳಿಕ ಈ ಘಟನೆಯನ್ನು ಬಜರಂಗದಳದ ಕಾರ್ಯಕರ್ತರಿಂದ ಗೋ ಕಳ್ಳತನಕ್ಕೆ ಯತ್ನ ಎಂಬುದಾಗಿ ಸುದ್ದಿ ಮಾಡುವ ಮೂಲಕ ಸಾಮಾಜಿಕ ಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಅಪಪ್ರಚಾರ ಮಾಡಲಾಗಿದೆ. ಇದು ಸಂಘಟನೆಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣಪ್ಪ ಕಲ್ಲಡ್ಕ, ಗುರುರಾಜ್ ಬಂಟ್ವಾಳ್, ಮಹೇಶ್ ಬಜೆತ್ತೂರು ಉಪಸ್ಥಿತರಿದ್ದರು.