ಬಂಟ್ವಾಳ: ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಭಾರತೀಯ ಆಹಾರ ನಿಗಮದಿಂದ ಪೂರೈಕೆಯಾದ ಸುಮಾರು 3892.95.400 ಕ್ವಿಂಟಾಲ್ ಅಂದರೆ ಅಂದಾಜು ಒಂದುವರೆ ಕೋಟಿ ರೂಪಾಯಿ ಮೌಲ್ಯದ ಅಕ್ಕಿಯ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಭಾರೀ ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನಲ್ಲಿರುವ ಭಾರತೀಯ ಆಹಾರ ನಿಗಮದ ಗೋದಾಮಿನಿಂದ ಬಂಟ್ವಾಳದ ಬಿ.ಸಿ. ರೋಡ್ ನ ಗೋದಾಮಿಗೆ ಸರಬರಾಜು ಆಗಿರುವ ಸುಮಾರು 40 ಲೋಡ್ ಅಕ್ಕಿ ಕಾಣೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ‘ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಿಸಲು ಪೂರೈಕೆಯಾದ ಅಕ್ಕಿಗೆ ಸಂಬಂಧಿಸಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಬಂದಿವೆ. ಹಾಗಾಗಿ ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಒಂದೊಮ್ಮೆ ದುರುಪಯೋಗ ಆಗಿರುವುದು ಕಂಡು ಬಂದಿದ್ದರೆ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಶಾಸಕರ ದೂರಿನ ಬೆನ್ನಲ್ಲೇ ಮಂಗಳೂರಿನ ಸಹಾಯಕ ಆಯುಕ್ತ ಹಾಗೂ ತಾಲೂಕಿನ ದಂಡಾಧಿಕಾರಿ ಗೊಡೌನ್ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಲೆಕ್ಕಾಚಾರದ ಸ್ಪಷ್ಟವಾದ ಮಾಹಿತಿಯನ್ನು ಕಲೆಹಾಕುತ್ತಿದ್ದು, ಮತ್ತು ತನಿಖೆಯ ದೃಷ್ಟಿಯಿಂದ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಗೊಡೌನ್ ನಲ್ಲಿ ಎಷ್ಟು ಮೌಲ್ಯದ ಅಕ್ಕಿಯ ಅವ್ಯವಹಾರ ನಡೆದಿದೆ ಮತ್ತು ಯಾವ ಯಾವ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ವಿವರವಾಗಿ ತಿಳಿಸುತ್ತೇವೆ ಎಂದು ತಾಲೂಕಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.