ಬಂಟ್ವಾಳ: ಮೆಸ್ಕಾಂ ಬಂಟ್ವಾಳ ಉಪವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಶ್ರೀರಾಮ ಎಲೆಕ್ಟ್ರಕಲ್ ಸಹಕಾರದಲ್ಲಿ ಬಂಟ್ವಾಳ ತಾ. ಎರಡು ಗ್ರಾಮಗಳಾದ ಮಣಿನಾಲ್ಕೂರು ಮತ್ತು ಸರಪಾಡಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಡು ಬಡತನದ 13 ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಡುವ ಮೂಲಕ ಸಾರ್ವತ್ರಿಕ ಪ್ರಶಂಶೆಗೊಳಗಾಗಿದ್ದಾರೆ.
ಕಳೆದ ಹಲವು ಸಮಯಗಳಿಂದ ಕಾರಣಾಂತರದಿಂದ ಸರಪಾಡಿಯ ಕಂಗಿನಾಡಿ, ಮಣಿನಾಲ್ಕೂರಿನ ಕೊಟ್ಟಿಂಜ, ನೇಲ್ಯಪಲ್ಕೆ ಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೊಳಪಟ್ಟ ಈ 13 ಮನೆಗಳು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದವು. ಈ ಬಗ್ಗೆ ಸ್ಥಳೀಯ ಪ್ರಮುಖರು ಶಾಸಕ ರಾಜೇಶ್ ನಾಯಕ್ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ 13 ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸುವಂತೆ ಸೂಚಿಸಿದ್ದರು.
ವಿಶೇಷ ಮುತುವರ್ಜಿ ವಹಿಸಿದ ಮೆಸ್ಕಾಂನ ಅಧೀಕ್ಷಕ ಮಂಜಪ್ಪ ಅವರ ಮಾರ್ಗದರ್ಶನದಂತೆ ಬಂಟ್ವಾಳ ಮೆಸ್ಕಾಂನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿದ್ಯುತ್ ಸಂಪರ್ಕಕ್ಕೆ ತಗಲುವ ವೆಚ್ಚವನ್ನು ತಲಾ 4 ರಿಂದ 5 ಸಾವಿರ ರೂ.ವನ್ನು ವಯಕ್ತಿಕ ನೆಲೆಯಲ್ಲಿ ಭರಿಸಿದಲ್ಲದೆ, ಶ್ರೀರಾಮ ಎಲೆಕ್ಟ್ರಕಲ್ ನ ಗುತ್ತಿಗೆದಾರ ದೇವದಾಸ್ ಅವರನ್ನೊಳಗೊಂಡ ತಂಡ ವಿದ್ಯುತ್ ವಯರ್ ಜೋಡಣೆ ಸಹಿತ ಎಲ್ಲಾ ಕಾರ್ಯವನ್ನು ಉಚಿತವಾಗಿ ಮಾಡಿಕೊಟ್ಟರೆ, ಮೆಸ್ಕಾಂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಮಾಡಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಅವರು ಫಲಾನುಭವಿ ಇಂದಿರಾ ಅವರ ನಿವಾಸದ ವಿದ್ಯುತ್ ಸ್ವಿಚ್ ಹಾಕುವ ಮೂಲಕ ಕತ್ತಲೆ ತುಂಬಿದ ತನಿಯಾರ್, ರಾಮ, ಬಾಬು ಮುಗೇರ, ಶೋಭಾ, ಬಾಬುಕೊರಗ, ಸೋಮು, ಜಾನಕಿ, ಚಲ್ಲಿ, ಅಕ್ಕು, ಯಶೋಧ, ನೀಲಮ್ಮ, ಇಂದಿರಾ, ಹರೀಶ್ ಕೆ, ಎಂಬವರ 13 ಮಂದಿ ಫಲಾನುಭವಿಗಳ ಮನೆಯಲ್ಲಿ ಬೆಳಕು ಹರಿಯಿತಲ್ಲದೆ ಈ ಕುಟುಂಬದ ಮುಖದಲ್ಲು ಸಂತಸ ತುಂಬಿತ್ತು.
ಮೆಸ್ಕಾಂ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರ ಈ ಕಾರ್ಯಕ್ಕೆ ಶಾಸಕ ರಾಜೇಶ್ ನಾಯಕ್ ಅಭಿನಂದನೆ ಸಲ್ಲಿಸಿದರು. ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಪೈ, ಸಹಾಯಕ ಇಂಜಿನಿಯರ್ ಗಣೇಶ್, ಕಿರಿಯ ಇಂಜಿನಿಯರ್ ನಿತಿನ್ ಕಕ್ಕೆಪದವು ಶಾಖೆ , ಗುತ್ತಿಗೆ ದಾರ ದೇವದಾಸ್, ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ ಅರಳ,ಸುದರ್ಶನ್ ಬಜ,ರಮಾನಾಥ ರಾಯಿ,ರಾಮಕೃಷ್ಣ ಮಯ್ಯ,ಪುರುಷೋತ್ತಮ ಪೂಜಾರಿ,ಧನಂಜಯ ಶೆಟ್ಟಿ,ಚಿದಾನಂದ ರೈ ಕಕ್ಯೆ, ಅಭಿಷೇಕ್ ಪೂಜಾರಿ, ದಿನೇಶ್ ಗೌಡ,ಉಮೇಶ್ ಮೊದಲಾದವರು ಉಪಸ್ಥಿತಿರಿದ್ದರು.