ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ವೇಣೂರು ಎಂಬಲ್ಲಿ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ (57) ಎಂಬವರು ನಾಪತ್ತೆಯಾಗಿದ್ದು, ಅವರ ಮೊಬೈಲ್ ವಾಲ್ಪಾಡಿಯ ಕೊಯಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು.
ಪಂಚಾಯತ್ ಕಾರ್ಯದರ್ಶಿಯಾಗಿರುವ ಲಕ್ಷ್ಮೀನಾರಾಯಣ ಅವರ ನಾಪತ್ತೆ ಬಗ್ಗೆ ಅವರ ಪತ್ನಿ ವಂದನಾ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಅದರಂತೆ ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕ್ಕುಡೆ ಚಡಾವ್ ತೋರಿಸುತ್ತಿದ್ದುದರಿಂದ ಪುಂಜಾಲಕಟ್ಟೆ ಪೊಲೀಸರು ಮತ್ತು ಸಂಬಂಧಿಕರು ಹುಡುಕಾಡಿಕೊಂಡು ಬಂದಿದ್ದರು. ಅದರೆ ಅವರ ಮೊಬೈಲ್ ಮಾತ್ರ ರಸ್ತೆ ಬದಿ ಪತ್ತೆಯಾಗಿದ್ದು, ಬೈಕ್ ನಲ್ಲಿ ಬಂದಿದ್ದ ಲಕ್ಷ್ಮೀನಾರಾಯಣ ಪತ್ತೆಯಾಗಿರಲಿಲ್ಲ. ಮೊಬೈಲ್ ನ್ನು ವಾಲ್ಪಾಡಿಯಲ್ಲಿ ಎಸೆದು ಬೈಕ್ ನಲ್ಲಿ ಹೋಗಿರಬಹುದೆಂದು ಹೇಳಲಾಗುತ್ತಿತ್ತು.
ಗ್ರಾ.ಪಂ.ನಲ್ಲಿ ಗ್ರಾಮ ಸಭೆ ನಡೆದ ಬಳಿಕ ಇವರು ತುಂಬಾ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ. ಮಾನಸಿಕವಾಗಿ ನೊಂದುಕೊಂಡಿದ್ದ ಅವರು ಇತ್ತೀಚೆಗೆ ಬಹಳಷ್ಟು ಕುಗ್ಗಿ ಹೋಗಿದ್ದರು ಎನ್ನಲಾಗಿದೆ.
ಅವರು ನಿನ್ನೆ ಅಂದರೆ ಸೆ. 12 ರಂದು ಮಧ್ಯಾಹ್ನ 12 ಗಂಟೆವರೆಗೆ ಆಫೀಸಿಗೆ ಬರದ ಕಾರಣ ಇಲ್ಲಿನ ಸಿಬ್ಬಂದಿ ಪೋನ್ ಮಾಡಿದಾಗ ನನಗೆ ಹುಷಾರಿಲ್ಲ ಕೆಲವೊಂದು ಟೆಸ್ಟ್ ಗಳನ್ನು ಇಸಿಜಿ ಸಹಿತ ಇನ್ನೂ ಕೆಲವು ಪರೀಕ್ಷೆ ನಡೆಸಿ ಮತ್ತೆ ಬರುವುದಾಗಿ ತಿಳಿಸಿದ್ದರಂತೆ. ಆ ಬಳಿಕ ಅಫೀಸಿಗೆ ಬರದೆ ಮನೆಗೂ ಹೋಗದೆ ಪೋನ್ ಸ್ವೀಚ್ ಆಫ್ ಆಗಿತ್ತು.