


ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ರಸ್ತೆಯ ಕಾಮಗಾರಿ ಅಭಿವೃದ್ಧಿಯಲ್ಲಿದ್ದು, ಕಾಮಗಾರಿ ವೇಳೆ ರಸ್ತೆಗಳೆಲ್ಲವೂ ಹದಗೆಟ್ಟು, ವಾಹನ ಸವಾರರ ಪರಾದಾಡುವ ಬಗ್ಗೆ ವಿಟಿವಿ ವರದಿ ಮಾಡಲಾಗಿತ್ತು. ವರದಿಯಲ್ಲಿ ರಸ್ತೆಯ ಕಾಮಗಾರಿ ವೇಳೆ ಹಳೆಯ ರಸ್ತೆಗಳೆಲ್ಲವೂ ಹದಗೆಟ್ಟು ನಿಂತಿದ್ದು, ಮಳೆ ಬಂತೆಂದರೆ ಸೂಕ್ತವಾಗಿ ನೀರು ಹರಿಯಲು ವ್ಯವಸ್ಥೆ ಇಲ್ಲದೆ ರಸ್ತೆ ಕೆಸರುಮಯವಾಗಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದ್ದು ಈ ಸಮಸ್ಯೆ ತೊಂದರೆಗಳೆಲ್ಲವೂ ನಿನ್ನೆ ಮೊನ್ನೆಯಿಂದ ಶುರುವಾಗಿಲ್ಲ.. ಬದಲಾಗಿ ಕಲ್ಲಡ್ಕ ರಸ್ತೆ ಅಗಲೀಕರಣ, ರಾಷ್ಟೀಯ ಹೆದ್ದಾರಿ ದುರಸ್ತೀ ಕಾಮಗಾರಿ, ಫೈ ಓವರ್ ಕಾಮಗಾರಿ ಪ್ರಾರಂಭದಿಂದ ವಾಹನ ಸವಾರರು ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕಳೆದ ವರ್ಷವೂ ಭಾರಿ ವಾಹನಗಳು ಕೆಸರಿನಲ್ಲಿ ಸಿಲುಕಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಬಾರಿಯೂ ಅದೇ ರಾಗ ಅದೇ ತಾಳ ಎಂಬಂತೆ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಕೇರಳ ರೀತಿಯ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬಹುದಲ್ಲವೇ ಎಂಬಿತ್ಯಾದಿ ವಿಚಾರಗಳ ಕುರಿತು ನೇರವಾಗಿ ಕರಾವಳಿಯ ಎಂ ಎಲ್ ಹಾಗೂ ಎಂ ಪಿ, ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡುವ ಮೂಲಕ ಕೆಲ ದಿನಗಳ ಹಿಂದೆ ವರದಿ ಮಾಡಲಾಗಿತ್ತು.

ವರದಿಗೆ ಬಿತ್ತರಿಸಿದ ಕಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ಅವರು ಇಂದು ಕಲ್ಲಡ್ಕಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ, ಪಾದಾಚಾರಿಗಳು ದಾಟಲು ನಾಲ್ಕು ಕಡೆ ಕಾಲುದಾರಿ ನಿರ್ಮಾಣ, ತ್ಯಾಜ್ಯಗಳನ್ನು ತೆಗೆಯುವುದು ಹಾಗೂ ಹೆದ್ದಾರಿ ಸಮತಟ್ಟುಗೊಳಿಸಲು ನಿರಂತರವಾಗಿ ವೆಟ್ ಮಿಕ್ಸ್ ಹಾಕಲು ಹೆದ್ದಾರಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು ಸ್ವತಃ ಸ್ಕೂಟರ್ ನಲ್ಲಿ ಸಂಚರಿಸಿ ಹೆದ್ದಾರಿ ಸ್ಥಿತಿಗತಿಯನ್ನು ಖುದ್ದಾಗಿ ವೀಕ್ಷಿಸಿದರು.
