ಮಂಗಳೂರು: ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ಐವರ ತಂಡ ಮೂವರ ಕೊಲೆಗೆ ಯತ್ನಿಸಿದ ಘಟನೆ ಮೂಡಬಿದಿರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ.
ಗಂಟಾಲ್ಕಟ್ಟೆ ಎಂಬಲ್ಲಿನ ಗೋವುಗುಡ್ಡೆ ನಿವಾಸಿ ಶಬೀರ್, ಮಹಮ್ಮದ್ ಅನ್ಸಾರ್ ಮತ್ತು ಇಸ್ಮಾಯಿಲ್ ತೀವ್ರ ಗಾಯಗೊಂಡು ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಅದೇ ಪರಿಸರದ ಸಹುಲ್, ಫಾರೂಕ್, ಜಲೀಲ್, ಇಬ್ರಾನ್ ಮತ್ತು ಶಾಫಿ ಹಲ್ಲೆಗೈದವರು.
ಅನ್ಸಾರ್ ತಮ್ಮ ಮಾವ ಶಬೀರ್ ಮತ್ತು ಚಿಕ್ಕಪ್ಪ ಇಸ್ಮಾಯಿಲ್ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಪಿಕ್ಅಪ್ ಮತ್ತು ರಿಟ್ಜ್ ಕಾರಿನ ಮೂಲಕ ಈ ಮೂವರನ್ನು ತಡೆದಿದ್ದು, ತಲವಾರು ಮತ್ತಿತರ ಮಾರಕಾಯುಧಗಳಿಂದ ಕೊಲೆಗೆ ಯತ್ನಿಸಿದ್ದಾರೆ.
ಘಟನೆಯಲ್ಲಿ ಅನ್ಸಾರ್ ಮತ್ತು ಇತರ ಇಬ್ಬರಿಗೂ ಗಂಭೀರ ಗಾಯವಾಗಿವೆ. ಅನ್ಸಾರ್ ನ ತಂದೆಯೊಂದಿಗೆ ಆರೋಪಿಗಳು ಪೂರ್ವದ್ವೇಷ ಹೊಂದಿದ್ದು, ಇದೇ ಕಾರಣಕ್ಕಾಗಿ ಕೊಲೆಗೆ ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳಿಗೆ ತೀವ್ರ ಹುಡುಕಾಟ ನಡೆಸಿದ್ದು, ಎಲ್ಲ ಆರೋಪಿಗಳು ಮನೆ ಖಾಲಿ ಮಾಡಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಡುಬಿದಿರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.