ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ತರುವ ಹಿನ್ನೆಲೆ ರಾಜ್ಯ ಸರ್ಕಾರ ಬಾರ್ಗಳಲ್ಲಿ ಪಾರ್ಸೆಲ್ಗೆ ಮಾತ್ರವೇ ಅವಕಾಶ ನೀಡಿದೆ. ಸರ್ಕಾರದ ಆದೇಶಕ್ಕೆ ಮದ್ಯ ಮಾರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ವೈನ್ ಮರ್ಚೆಂಟ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಈ ಕುರಿತು ಹೇಳಿಕೆ ನೀಡಿದ್ದು, ಸರಕಾರ ಕೇವಲ ತನ್ನ ಆದಾಯ ನೋಡಿದರೆ ಸಾಲೋದಿಲ್ಲ. ಮದ್ಯ ಮಾರಾಟಗಾರರ ಹಿತವನ್ನು ಕಾಪಾಡಬೇಕು ಎಂದಿದ್ದಾರೆ.
ಮದ್ಯದಂಗಡಿಗಳಿಗೆ ಪಾರ್ಸೆಲ್ಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ. ಈ ಆದೇಶಕ್ಕೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ನ ವಿರೋಧವಿದೆ. ಹಿಂದಿನ ಲಾಕ್ಡೌನ್ನಿಂದ ಚೇತರಿಸಿಕೊಳ್ಳುವಾಗಲೇ ಈ ಆದೇಶ ಬಂದಿದೆ. ಶೇಕಡಾ 50 ಗ್ರಾಹಕರನ್ನು ಇರಿಸಿಕೊಂಡು ವ್ಯಾಪಾರ ನಡೆಸಲು ಅವಕಾಶ ಕೊಡಿ. ಕೇವಲ ಪಾರ್ಸೆಲ್ ನೀಡುವುದರಿಂದ ವ್ಯಾಪಾರ ಆಗುವುದಿಲ್ಲ ಎಂದಿದ್ದಾರೆ.
ಕೋವಿಡ್ ನಿಯಮಾವಳಿ ಪಾಲಿಸಲು ನಾವು ಬದ್ಧರಾಗಿದ್ದೇವೆ. ಆಹಾರದೊಂದಿಗೆ ಮದ್ಯವನ್ನು ಸೇವಿಸಲು ಅವಕಾಶ ಮಾಡಿಕೊಡಿ. ರಾಜ್ಯದಲ್ಲಿ 5,300 ರೆಸ್ಟೋರೆಂಟ್ ಸಹಿತ ಬಾರ್ಗಳಿವೆ. ಶುಭ ಕಾರ್ಯಗಳು ಆರಂಭವಾಗುವಾಗಲೇ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಪರವಾನಿಗೆ ರಿನೀವಲ್ ಮಾಡುವ ಸಮಯ ಬಂದಿದೆ ಎಂದು ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ