ರಾಮನಗರ: ರಾಮನಗರ ಜಿಲ್ಲೆ ಕನಕಪುರದಲ್ಲಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನಾಗರಾಜ್ ಎಂಬವರಿಗೆ ಸೇರಿದ ಶಕ್ತಿ ಬ್ಯಾಟರೀಸ್ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಥರ್ಮಕೋಲಿಗೆ ಬೆಂಕಿಯ ಕಿಡಿ ಬಿದ್ದು ಅಲ್ಲಿಂದ ಬೆಂಕಿ ಕಾರ್ಖಾನೆಗೆ ಹಬ್ಬಿದೆ. ಯುಪಿಎಸ್ ಹಾಗೂ ಇತರೆ ಪ್ರೊಡಕ್ಟ್ಗಳಿಗೆ ಅಲ್ಲಿ ಬ್ಯಾಟರೀಸ್ ತಯಾರಾಗುತ್ತಿತ್ತು. ಈ ಘಟನೆಯ ನಂತರ ವಿಷಯ ತಿಳಿದ ಅಗ್ನಿಶಾಮಕ ದಳದವರು 5 ವಾಹನಗಳ ಮೂಲಕ ಬೆಂಕಿಯನ್ನ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅವಘಡದಿಂದಾಗಿ ಕಂಪನಿಯಲ್ಲಿದ್ದ ಬ್ಯಾಟರೀಸ್ ಗಳೆಲ್ಲವೂ ಸಂಪೂರ್ಣ ಭಸ್ಮವಾಗಿದೆ. ಆದರೆ ಈ ಸಮಯದಲ್ಲಿ ಕಾರ್ಖಾನೆಯಲ್ಲಿದ್ದ 50 ರಿಂದ 60 ಜನ ಕಾರ್ಮಿಕರು ತಕ್ಷಣವೇ ಕಾರ್ಖಾನೆಯಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಬ್ಬುತ್ತಿದ್ದ ಹಿನ್ನೆಲೆ ಕಾರ್ಖಾನೆಯ ಬಳಿ ಪ್ರವೇಶವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
ಕಾರ್ಖಾನೆಯಲ್ಲಿದ್ದ ಸಿಲಿಂಡರ್ಗಳು ಸಿಡಿಯುವ ಸಾಧ್ಯತೆ ಇದ್ದುದರಿಂದ ಮುನ್ನೆಚ್ಚರಿಕೆಯಾಗಿ ಕಂಪನಿಯ ಆವರಣವನ್ನು ಪೊಲೀಸರು ಬಂದ್ ಮಾಡಿದರು. ಬೆಂಕಿಯಿಂದಾಗಿ ಕಾರ್ಖಾನೆಯೊಳಗೆ 2 ಸಿಲಿಂಡರ್ ಸಿಡಿದಿದ್ದು, 6 ಸಿಲಿಂಡರ್ ಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ವಶಕ್ಕೆ ಪಡೆದರು.