

ಬೆಳ್ತಂಗಡಿ: ಆಟೋ ರಿಕ್ಷಾವೊಂದರಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಸಹಿತ ಗಾಂಜಾವನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕಳೆಂಜಿಬೈಲ್ ನಿವಾಸಿ ಅಬ್ದುಲ್ ಸಲೀಂ (35) ಎಂದು ಗುರುತಿಸಲಾಗಿದೆ.
ಜ.16ರಂದು ಬೆಳಿಗ್ಗೆ ಅವಿನಾಶ್ ಹೆಚ್ ಪೊಲೀಸ್ ಉಪ ನಿರೀಕ್ಷಕರು ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ KA-19-D-5283ನೇ ಆಟೋರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿರುತ್ತಾರೆ. ಆದರೆ ಚಾಲಕ ರಿಕ್ಷಾವನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ ಚಾಲಕ ಅಟೋ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನನ್ನು ಸುತ್ತುವರಿದು ಹಿಡಿಯಲಾಗಿರುತ್ತದೆ.
ಈ ವೇಳೆ ಆತನ ನಡವಳಿಕೆಯಿಂದ ಅನುಮಾನಗೊಂಡು ಆತನ ಹೆಸರು ವಿಳಾಸ ತಿಳಿಸಿ ಹಾಗೂ ತಾನು ಗಾಂಜಾ ಸೇವಿಸಿರುವುದಾಗಿ ತಿಳಿಸಿರುತ್ತಾನೆ. ಬಳಿಕ ಆಟೋರಿಕ್ಷಾವನ್ನು ತಪಾಸಣೆ ನಡೆಸಿದಾಗ ಸುಮಾರು 1½ ಕೆ.ಜಿ ಯಷ್ಟು ಗಾಂಜಾ ಪತ್ತೆಯಾಗಿರುತ್ತದೆ. ಇದನ್ನು ಪರಿಚಯವಿರುವ ನೌಶದ್ ಎಂಬಾತನು ನನಗೆ ಸೇವನೆ ಮಾಡಲು ಮತ್ತು ಗಿರಾಕಿಗಳಿಗೆ ಮಾರಾಟ ಮಾಡಲು ನೀಡಿದ್ದನ್ನು ಅಟೋರಿಕ್ಷಾದಲ್ಲಿಟ್ಟು ಉಪ್ಪಿನಂಗಡಿ ಕಡೆಗೆ ಮಾರಾಟ ಮಾಡಲು ತೆರಳುತ್ತಿರುವುದಾಗಿ ತಿಳಿಸಿರುತ್ತಾನೆ. ಈ ಮಾದಕ ವಸ್ತು ಗಾಂಜಾದ ಅಂದಾಜು ಮೌಲ್ಯ ರೂ 15,000/- ಆಗಬಹುದು. ನಿಷೇದಿತ ಮಾದಕ ವಸ್ತುವನ್ನು ಹಾಗೂ ಆರೋಪಿಯನ್ನು ಮುಂದಿನ ಕಾನೂನುಕ್ರಮಕ್ಕಾಗಿ ವಶಕ್ಕೆ ಪಡೆದು ಉಪ್ಪಿನಂಗಡಿ ಠಾಣಾ ಅ.ಕ್ರ: 02/2025 ಕಲಂ: 8(c), 20 (b) ii(B), 27(b) NDPS ಕಾಯ್ದೆ ಮತ್ತು ಕಲಂ 3(5) BNS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.