ಬೆಳ್ತಂಗಡಿ: ಯುವ ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ನಿವಾಸಿ ಸ್ವರಾಜ್(24) ನಿನ್ನೆ ಬೆಳಗ್ಗೆ ತನ್ನ ಮನೆಯ ಬಳಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸ್ವರಾಜ್ ಆನ್ ಲೈನ್ ಲೋನ್ ಆಪ್ ಕಂಪನಿಯಿಂದ ಲೋನ್ ಪಡೆದಿದ್ದು, ಹಂತಹಂತವಾಗಿ ಕಂಪನಿ ಹೆಚ್ಚುವರಿ ಹಣ ವಾಪಸ್ ಪಡೆಯಲು ಬೆದರಿಕೆಗಳನ್ನು ಹಾಕುತ್ತಿತ್ತು. ಸ್ವರಾಜ್ ವಾಟ್ಸಪ್ ನಲ್ಲಿ ಅಕ್ಕನ ಮಗಳ ಡಿಪಿ ಫೋಟೋ ಹಾಕಿದ್ದ. ಮಗುವಿನ ಫೋಟೋವನ್ನು ‘Baby for sale’ ಅಂತ ಎಡಿಟ್ ಮಾಡಿ ಆತನ ಸ್ನೇಹಿತರು ಮತ್ತು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದವರಿಗೆಲ್ಲ ಫಾರ್ವಡ್ರ ಮಾಡಲಾಗಿತ್ತು.
ಸ್ವರಾಜ್ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟನ್ನು ನಕಲು ಮಾಡಿದ್ದ ಲೋನ್ ಆ್ಯಪ್ ನವರು ಮಗುವಿನ ಫೋಟೋವನ್ನು ನಕಲಿಸಿ ಮಗು ಮಾರಾಟಕ್ಕಿದೆ ಎಂದು ಹೇಳಿ ಫಾರ್ವಡ್ ಮಾಡಿದ್ದರು. ಸ್ವರಾಜ್ ಬ್ಲಾಕ್ ಮೇಲ್ ಒಳಗಾಗಿದ್ದು, ಒತ್ತಡ ತಡೆಯಲಾಗದೇ ಆ.30 ರಂದು ಸ್ವರಾಜ್ 30 ಸಾವಿರ ರೂ. ಹಣವನ್ನು ಕಟ್ಟಿದ್ದರು ಎನ್ನಲಾಗಿದೆ.
ಆ.31ರಂದು ಮಧ್ಯಾಹ್ನ 2 ಗಂಟೆ ಒಳಗೆ ಉಳಿದ ಹಣ ಬಡ್ಡಿ ಸಹಿತ ನೀಡುವಂತೆ ಡೆಡ್ ಲೈನ್ ನೀಡಿದ್ದರು. ಇದರಿಂದ ತೀವ್ರ ನೊಂದು, ಹಿಂಸೆ ತಾಳಲಾರದೇ ಸ್ವರಾಜ್ ನಿನ್ನೆ ಬೆಳಗ್ಗೆ ಮನೆಯ ಬಳಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೋನ್ ಆ್ಯಪ್ ಕಿರುಕುಳದಿಂದಲೇ ಯುವಕ ಸಾವಿಗೆ ಶರಣಾದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.