ಬೆಳ್ತಂಗಡಿ: ಮುಂಡಾಜೆ ಗ್ರಾ.ಪಂ ಅಧ್ಯಕ್ಷರ ಪುತ್ರಿ 10 ವರ್ಷ ಪ್ರಾಯದ ಹೆಣ್ಣು ಮಗಳನ್ನು ದಾರಿತೋರಿಸುವ ನೆಪದಲ್ಲಿ ಅಪರಿಚಿತರು ಕರೆದುಕೊಂಡು ಹೋದ ಘಟನೆ ಮುಂಡಾಜೆ ಗ್ರಾಮದ ಕೂಳೂರು ಎಂಬಲ್ಲಿ ನಡೆದಿದೆ.
ಅದೃಷ್ಟವಶಾತ್ ಅವರು ಸಾಗುತ್ತಿದ್ದ ರಿಕ್ಷಾ ರಸ್ತೆಯ ಕೆಸರಿನಲ್ಲಿ ಹೂತು ಹೋಗಿ ಮಗುವನ್ನು ಇಳಿಸಿ ಅವರು ಮುಂದೆ ಹೋಗಿದ್ದಾರೆ ಎನ್ನಲಾಗಿದೆ. ಅಲ್ಲಿನ ಕೂಳೂರು ಜನತಾ ಕಾಲನಿಯ ಸಂಬಂಧಿಕರ ಮನೆಯಲ್ಲಿದ್ದ ವೇಳೆ ರಿಕ್ಷಾದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಮನೆಯಂಗಳಕ್ಕೆ ಬಂದು ಸ್ಥಳೀಯ ಪ್ರದೇಶದ ದಾರಿ ತೋರಿಸಲು ಮಗುವಿನಲ್ಲಿ ಕೇಳಿಕೊಂಡಿದ್ದ.
5 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ತಕ್ಷಣಕ್ಕೆ ರಿಕ್ಷಾ ಹತ್ತಿಹೋಗಿದ್ದಳು. ಸ್ವಲ್ಪದರಲ್ಲೇ ಬಾಲಕಿ ಮನೆ ಸುತ್ತ ಕಾಣದಾದಾಗ ಎಲ್ಲರೂ ಆತಂಕಗೊಂಡರು. ವಿಚಾರ ತಿಳಿಯುತ್ತಿದ್ದಂತೆ ಜನ ಜಮಾಯಿಸಿದರು. ಈ ವೇಳೆ ಅಕ್ಕ ಪಕ್ಕದ ಮನೆಯವರೆಲ್ಲರೂ ಅಲ್ಲೇ ಒಳ ರಸ್ತೆಯಲ್ಲಿ ಓಡಿಕೊಂಡು ಬರುವ ವೇಳೆ ರಿಕ್ಷಾವೊಂದು ಸಮರ್ಪಕವಾಗಿಲ್ಲದ ರಸ್ತೆಯಲ್ಲಿ ಅದರ ಟಯರ್ ಕೆಸರಿನಲ್ಲಿ ಹೂತು ಹೋದ ರೀತಿಯಲ್ಲಿ ದೂರದಿಂದ ಕಂಡುಬಂತು.
ರಿಕ್ಷಾದಲ್ಲಿದ್ದವರು ಕೆಳಗೆ ಇಳಿದಿದ್ದ ವೇಳೆ ಮಗು ಕೂಡ ಇಳಿದಿತ್ತು. ಜನ ಹತ್ತಿರ ಬರುತ್ತಿದ್ದಂತೆ ರಿಕ್ಷಾ ಅಲ್ಲಿಂದ ತೆರಳಿದೆ. ಬಾಲಕಿ ಮನೆ ಸೇರಿದ್ದಾಳೆ. ಆದರೆ ಜನಕ್ಕೆ ರಿಕ್ಷಾವನ್ನು ಗುರುತಿಸುವುದು ಅಸಾಧ್ಯವಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಬಾಲಕಿಯನ್ನು ಊರವರು ಮನೆಗೆ ವಾಪಾಸು ಕರೆ ತಂದಿದ್ದಾರೆ.ನಂತರ ಬಾಲಕಿಯನ್ನು ಮನೆಯವರು ವಿಚಾರಿಸಿದಾಗ, ಅಲ್ಲಿ ಬಂದಿದ್ದವರು ಆಚಾರಿಕೊಟ್ಟಿಗೆಯವರ ದಾರಿ ತೋರಿಸಲು ಕೇಳಿಕೊಂಡಿದ್ದರಂತೆ. ರಿಕ್ಷಾದ ಬಳಿ ಹೋದಾಗ ಅದರಲ್ಲಿ ಇನ್ನೊಂದು ಮಗು ಕೂಡಾ ಇತ್ತು. ಆದ್ದರಿಂದ ನಾನೂ ರಿಕ್ಷಾ ಹತ್ತಿದೆ. ಹಿಂದೆ ಇಬ್ಬರು ವ್ಯಕ್ತಿಗಳೂ ಕೂಡ ಇದ್ದರು. ಅಷ್ಟರಲ್ಲಿ ರಿಕ್ಷಾ ಟಯರ್ ಹೂತುಹೋಗಿ ನಿಂತಿತು. ನಾನು ಇಳಿದೆ ಎಂದಿದ್ದಾಳೆ.
ಘಟನೆಯ ಬಳಿಕ ಊರವರು, ಅವರು ವಿಳಾಸ ಕೇಳಿದ್ದ ಮನೆಯವರನ್ನು ವಿಚಾರಿಸಿದಾಗ ಅಲ್ಲಿಗೆ ಯಾರೂ ಹೋಗಿಲ್ಲ ಎಂದು ತಿಳಿದಿದೆ. ಆದ್ದರಿಂದ ಊರಿನಲ್ಲಿ ಆತಂಕ ಮೂಡಿದೆ. ಹಾಗಾದರೆ ರಿಕ್ಷಾದಲ್ಲಿ ಬಂದ ಆ ಅಪರಿಚಿತರು ಯಾರು?ಬಾಲಕಿಯನ್ನು ಮನೆಬಾಗಿಲಿನಿಂದ ಕರೆದುಕೊಂಡು ಹೋದ ಉದ್ದೇಶವಾದರೂ ಏನು? ಬಾಲಕಿ ರಿಕ್ಷಾದಿಂದ ಇಳಿದ ವೇಳೆ ಊರವರು ಬರುವುದನ್ನು ನೋಡಿ ರಿಕ್ಷಾದವರು ನಿಲ್ಲಿಸದೆ ಮಗುವನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋದದ್ದು ಯಾಕೆ? ಎಂಬಿತ್ಯಾಧಿ ಪ್ರಶ್ನೆಗಳು ಉತ್ತರಿಸಲು ಉಳಿದಿವೆ.
ಇಷ್ಟೆಲ್ಲಾ ಆದರೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿಲ್ಲ.
ಉಜಿರೆಯಲ್ಲಿ ಕಳೆದ ಬಾರಿ ನಡೆದಿದ್ದ ಬಾಲಕನ ಅಪಹರಣ ಪ್ರಕರಣದಂತೆ ಇಲ್ಲೂ ಮಗುವನ್ನು ಅಪಹರಣ ಮಾಡಲಾಗಿದೆ ಎಂಬುದಾಗಿ ಒಮ್ಮೆಗೆ ಆತಂಕ ಶುರುವಾಗಿದ್ದರೂ ಮಗು ಸುರಕ್ಷಿತವಾಗಿ ಮನೆ ಸೇರಿದ್ದರಿಂದ ಮನೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಬೀಟ್ ಪೊಲೀಸ್ ಗೂ ತಿಳಿಸಿಲ್ಲ. ಪೊಲೀಸ್ ದೂರು ನೀಡುತ್ತಿದ್ದರೆ ಅಕ್ಕಪಕ್ಕದ ಮನೆ- ಅಂಗಡಿ, ಅಥವಾ ಸೋಮಂತಡ್ಕ ಪೇಟೆಯಲ್ಲಿರುವ ಅಂಗಡಿಗಳ ಸಿಸಿ ಟಿವಿ ಪುಟೇಜ್ ಪಡೆದು ಪತ್ತೆ ಮಾಡಬೇಕು. ಧರ್ಮಸ್ಥಳ ಠಾಣಾ ಪೊಲೀಸರು ಘಟನೆ ಬಗ್ಗೆ ಸ್ವಯಂ ಆಸಕ್ತಿ ವಹಿಸಿ, ಪ್ರಕರಣ ದಾಖಲಿಸಿಕೊಂಡು ನಿಜಾಂಶ ಬಯಲುಮಾಡಬೇಕು ಎಂದು ಊರವರು ಅಭಿಪ್ರಾಯಿಸಿದ್ದಾರೆ.