ಸಿಲಿಕಾನ್ ಸಿಟಿ ಮಂದಿ ಕಳೆದ ಮೂರ್ನಾಲ್ಕು ದಿನಗಳಿಂದ ಆಗುತ್ತಿರುವ ಮಳೆಗೆ ಸಂತಸಗೊಂಡಿದ್ದಾರೆ. ಗಾಳಿ ಸಹಿತ 5 ಮೀ.ಮೀ ಮಳೆಯಾಗಿದೆ. ನಗರದ ಮೆಜೆಸ್ಟಿಕ್, ಬೆಂಗಳೂರಿನ ಕೆ. ಆರ್ ಸರ್ಕಲ್, ಜೆಸಿ ರಸ್ತೆ, ಮೈಸೂರ್ ಬ್ಯಾಂಕ್ ಸರ್ಕಲ್, ಕೆ.ಆರ್.ಮಾರ್ಕೆಟ್, ಯಲಹಂಕ, ನೆಲಮಂಗಲ, ಜೆಸಿ ರೋಡ್, ರಾಜಾಜಿನಗರ, ಹುಳಿಮಾವು, ನಾಯಂಡಹಳ್ಳಿ, ಸೇರಿದಂತೆ ವಿವಿಧೆಡೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ . ಜೊತೆಗೆ ಕೆಲವೆಡೆ ಮಳೆ ಅವಾಂತರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನಲೆ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬಿರುಗಾಳಿ ಸಹಿತ ಮಳೆಗೆ ನಗರದ ಎನ್ಸಿ ಕಾಲೋನಿಯ ಬೋರ್ ಬ್ಯಾಂಕ್ ರಸ್ತೆ ಕುಸಿತವಾಗಿದೆ. ಮೇಟ್ರೋ ಕಾಮಗಾರಿ, ಪಕ್ಕದಲ್ಲೆ ರೇಲ್ವೆ ಲೈನ್ ಹಾಗೂ ರಾಜಕಾಲುವೆ ಮಾರ್ಗ ಇದ್ದು, ಮಳೆ ಪರಿಣಾಮ ರಸ್ತೆ ಕುಸಿದಿದೆ. ಈ ಮಾರ್ಗ ಟ್ಯಾನಿ ರಸ್ತೆ, ಪ್ರೆಸರ್ ಟೌನ್, ನಂದಿ ದುರ್ಗ, ಹಾಗೂ ಪಾಟರ್ ಟೌನ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿತ್ತು. ಆದರೆ, ರಸ್ತೆ ಕುಸಿತ ದಿಂದ ಎರಡು ಕಡೆ ರಸ್ತೆ ಬಂದ್ ಆಗಿದ್ದು,ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬಿಡು ಬಿಟ್ಟಿದ್ದಾರೆ.
ಹೈಗ್ರೌಂಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಮರ ಕುಸಿದು ಬಿದ್ದಿದ್ದು, ಆಟೋ ರಿಕ್ಷಾವೊಂದು ಜಖಂಗೊಂಡಿದೆ. ಅದೃಷ್ಟವಶಾತ್ ಆಟೋ ಚಾಲಕ ಭಾರಿ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್ ಬಳಿ ಭಾರಿ ಮಳೆಗೆ ನೀರು ನಿಂತಿದ್ದು, ವಾಹನ ಸವಾರರು ರಸ್ತೆ ಮೇಲೆ ಪರದಾಡುವಂತಾಗಿದೆ.
ಮುಕ್ಕಾಲುಗಂಟೆ ಬಂದ ಮಳೆಗೆ ನಾಯಂಡಹಳ್ಳಿ ಮುಖ್ತರಸ್ತೆ ಸಂಫೂರ್ಣ ಜಲಾವೃತವಾಗಿದ್ದು, ರಸ್ತೆ ಜಲಾವೃತವಾಗಿ ವಾಹನಸವಾರರು ಪರದಾಟ ನಡೆಸುವಂತಾಗಿದೆ. ಮಂಡಿಯುದ್ದಕ್ಕೆ ನಿಂತಿರುವ ಮಳೆ ನೀರಲ್ಲಿಯೇ ಸಂಚರಿಸುವ ದುಸ್ಥಿತಿ ಎದುರಾಗಿದೆ.