ಬೆಳ್ತಂಗಡಿ: ಪುಂಜಾಲಕಟ್ಟೆಯಲ್ಲಿ ಸ್ವಂತ ಮಗನನ್ನು ತಂದೆಯೇ ಕತ್ತಿಯಿಂದ ಕಡಿದು ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆರೋಪಿ ತಂದೆ ಪುಂಜಾಲಕಟ್ಟೆಯ ಸರ್ಕಾರಿ ಆಸ್ಪತ್ರೆಯ ಸಮೀಪ ಭಜನಾಮಂದಿರದ ಬಳಿಯ ನಿವಾಸಿ ಬಾಬು ನಾಯ್ಕ (58). ಕೊಲೆಯಾದ ಯುವಕನನ್ನು ಸಾತ್ವಿಕ್ (17) ಎಂದು ಗುರುತಿಸಲಾಗಿದೆ.
ಆರೋಪಿ ಬಾಬು ನಾಯ್ಕ ಕುಡಿತದ ಚಟ ಹೊಂದಿದ್ದನು. ಕೆಲದಿನಗಳಿಂದ ಈತ ತನ್ನ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಬಾಬು ನಾಯ್ಕ ಅವರ ಪತ್ನಿ ಕ್ಯಾಶ್ಯೂ ಫ್ಯಾಕ್ಟರಿ ಕೆಲಸಕ್ಕೆ ತೆರಳಿದ್ದರು. ಇಂದು ಮಧ್ಯಾಹ್ನ ಗಲಾಟೆ ನಡೆದಿದ್ದು, ಬಳಿಕ ಮಗ ಸಾತ್ವಿಕ್ ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆತನು ಅಲ್ಲೇ ಮನೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.