ಇಂಧನ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ. ವಿಧಾನಸೌಧಕ್ಕೆ ಎತ್ತಿನ ಗಾಡಿಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ವೇಳೆ ಎತ್ತುಗಳು ಬೆದರಿಕೊಂಡು ಓಡಾಡಿದ್ದರಿಂದ ಗಾಡಿಯಲ್ಲಿದ್ದ ಶಾಸಕರು ಕೆಳಗೆ ಬಿದ್ಧ ಘಟನೆ ನಡೆದಿದೆ. ಶಾಸಕ ವೆಂಕಟರಮಣಯ್ಯ ಮತ್ತು ಸಂಗಮೇಶ್ ಇದ್ದ ಎತ್ತಿನ ಗಾಡಿಯ ಎತ್ತುಗಳು ಹೆದರಿಕೊಂಡು ಅಡ್ಡಾದಿಡ್ಡಿ ಒಡಾಡಿದ್ದರಿಂದ ಆಯಾತಪ್ಪಿ ಕೈನಾಯಕರು ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಸಾಕಷ್ಟು ಜನ ಜಂಗುಳಿಯೂ ನೆರೆದಿತ್ತು. ಗಾಡಿಗಳನ್ನು ಹೊತ್ತು ತರುತ್ತಿದ್ದು ಎತ್ತುಗಳು ವಿಧಾನಸೌಧದ ಗೇಟ್ ಬಳಿ ಬರುತ್ತಿದ್ದಂತೆ ಬೆದರಿ ಅಡ್ಡಾದಿಡ್ಡಿ ಓಡಾಡಿವೆ. ಇದಕ್ಕೂ ಮುನ್ನ ವಿಂಡ್ಸರ್ ಮ್ಯಾನರ್ ಬಳಿ ಎತ್ತಿಗಾಡಿ ಬರುತ್ತಿದ್ದಾಗ ಮೊದಲೇ ಬೆದರಿದ ಎತ್ತುಗಳು ಭಾರದಿಂದಾಗಿ ಗಾಡಿಯ ನಿಯಂತ್ರಣ ಕಳೆದುಕಂಡಿತು. ಕೂಡಲೇ ಅಕ್ಕಪಕ್ಕದಲ್ಲೇ ಇದ್ದ ಕಾರ್ಯಕರ್ತರು ಗಾಡಿಯನ್ನು ಹಿಡಿದು ಸರಿದೂಗಿಸಿದರು.
ನಂತರ ಮತ್ತೆ ಚಾಲುಕ್ಯ ಸರ್ಕಲ್ ಬಳಿ ಜನಸಂಧಣಿ ಹಾಗೂ ಶಬ್ದದಿಂದ ಎತ್ತಗಳು ಗಾಬರಿಗೊಂಡು ದಿಕ್ಕು ತಪ್ಪಿತು. ಆಗಲೂ ಸಹ ಕಾರ್ಯಕರ್ತರು ಗಾಡಿಯನ್ನು ಸರಿಪಡಿಸಿ ಎತ್ತುಗಳು ಹೋಗಲು ಅನುವು ಮಾಡಕೊಟ್ಟರು. ಈ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಮಾಜಿ ಸಚಿವರು, ಶಾಸಕರು ಗಾಡಿಗಳಲ್ಲಿ ಆಗಮಿಸಿದ್ದರು.