ಬೆಂಗಳೂರು(ನ.7): ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿಗೆ ಒಳಗಾಗಿರುವ ಕೆಎಎಸ್ ಅಧಿಕಾರಿ ಡಾ. ಸುಧಾ, ತಮ್ಮ ಹುದ್ದೆಯನ್ನೇ ಅಪಾರ್ಥ ಮಾಡಿಕೊಂಡಿದ್ದಾರಾ ಎಂಬ ಅನುಮಾನ ಮೂಡುವಂತಿದೆ. ಏಕೆಂದರೆ ಭೂಸ್ವಾಧೀನಾಧಿಕಾರಿ ಆಗಿರುವ ಅವರು ಹಲವೆಡೆ ಅಕ್ರಮವಾಗಿ ‘ಭೂ ಸ್ವಾಧೀನ’ ಮಾಡಿಕೊಂಡಿರುವ ಪ್ರಕರಣಗಳು ಒಂದೊಂದಾಗಿ ಬಯಲಾಗುತ್ತಿವೆ. ಒಟ್ಟಿನಲ್ಲಿ ಎಸಿಬಿ ಅಧಿಕಾರಿಗಳು ಜಾಲಾಡಿದಷ್ಟೂ ಸುಧಾ ಆಸ್ತಿ ಪತ್ತೆ ಆಗುತ್ತಿದೆ.
ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಸುಧಾ ಅವರ ಮನೆ ‘ಆರಾಧಾನ’ಕ್ಕೆ ದಾಳಿ ಇಟ್ಟ ಅಧಿಕಾರಿಗಳು ಬಳಿಕ, ಸುಧಾಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 6 ಕಡೆ ಸರಣಿ ದಾಳಿ ನಡೆಸಿದ್ದಾರೆ. ಸುಧಾ ಸಂಬಂಧಿಕರು-ಆಪ್ತರು ಇರುವ ಮೈಸೂರು, ಸಾಗರ, ಉಡುಪಿಗಳಲ್ಲೂ ದಾಳಿ ನಡೆದಿದೆ.
ಬೆಂಗಳೂರಿನ ಎಸಿಬಿ ಅಧಿಕಾರಿ ಬಾಲಕೃಷ್ಣ ನೇತೃತ್ವದಲ್ಲಿ ಉಡುಪಿಯಲ್ಲೂ ದಾಳಿ ನಡೆದಿದ್ದು, ಉಡುಪಿ ಎಸಿಬಿ ಅಧಿಕಾರಿ ಸತೀಶ್, ಚಂದ್ರಕಲಾ ಸಾಥ್ ನೀಡಿದ್ದಾರೆ. ಸುಧಾ ಪತಿ ಅವರ ಗೆಳೆಯ ಬ್ರಹ್ಮಾವರ ತಾಲೂಕಿನ ಚಾಂತಾರಿನ ದೇವದಾಸ್ ಶೆಟ್ಟಿ ಎಂಬವರ ಮನೆಯಲ್ಲಿ ತಪಾಸಣೆ ನಡೆಯುತ್ತಿದೆ.
2007ರ ಬ್ಯಾಚ್ನ ಕೆಎಎಸ್ ಅಧಿಕಾರಿ ಆಗಿರುವ ಡಾ. ಸುಧಾ ಮೇಲಿನ ಆರೋಪಗಳು ಒಂದೆರಡಲ್ಲ. ಬಿಡಿಎದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಡಾ. ಸುಧಾ, ಕೆಂಪೇಗೌಡ್ ಲೇಔಟ್ ಹಾಗೂ ವಿಶ್ವೇಶ್ವರಯ್ಯ ಲೇಔಟ್ ನಿರ್ಮಾಣದ ಕಾರ್ಯಕ್ಕೆ ಕೈ ಹಾಕಿದ್ದರು. ಆಗ ಜಮೀನಿನ ಮೂಲ ಮಾಲೀಕರು ಹಾಗೂ ಬಿಡಿಎ ನಡುವಿನ ದಲ್ಲಾಳಿಗಳ ಜೊತೆ ಕಿಕ್ ಬ್ಯಾಕ್ ಪಡೆದ ಆರೋಪವಿದೆ. ಅಲ್ಲದೆ ದಲ್ಲಾಳಿಗಳಿಂದ ಕೋಟಿ ಕೋಟಿ ರೂ. ಲಂಚ ಪಡೆದ ಆರೋಪವಿದ್ದು, ಆ ಹಣವನ್ನು ಪತಿಯ ರಿಯಲ್ ಎಸ್ಟೇಟ್ಗೆ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಡಿಎಯಿಂದ ಸುಧಾ ಅವರನ್ನು ಇಲಾಖೆ ಬಿಡುಗಡೆ ಮಾಡಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯಕಟ್ಟಿನ ಜಾಗದಲ್ಲಿದ್ದ ಡಾ. ಸುಧಾ, ಒಂದೇ ಜಾಗದಲ್ಲಿ 2013ರಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬಿಡಿಎ ಭೂಸ್ವಾಧೀನ ವಿಭಾಗದಲ್ಲಿ 5 ವರ್ಷ ಅಪರ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಕೆಂಪೇಗೌಡ ಬಡಾವಣೆ ಉಸ್ತುವಾರಿಯನ್ನೂ ಹೊಂದಿದ್ದರು. ಬಿಡಿಎ ಉಪ ಕಾರ್ಯದರ್ಶಿ-1ರಲ್ಲೂ ಕರ್ತವ್ಯ ನಿರ್ವಹಣೆ ಮಾಡಿದ್ದ ಇವರು 2013ರಿಂದ ಬಿಡಿಎನಲ್ಲೇ ಠಿಕಾಣಿ ಹೂಡಿದ್ದರು. 2018ರಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸುವ ಆರೋಪ ಅಡಿ ದೂರು ದಾಖಲಾಗಿತ್ತು. ಕೆಂಪೇಗೌಡ ಬಡಾವಣೆಯಲ್ಲಿ ಕೋಟ್ಯಂತರ ರೂ. ಹಗರಣ ನಡೆಸಿರುವ ಆರೋಪ, ಬ್ರೋಕರ್ಸ್ ಜೊತೆ ಕೈಜೋಡಿಸಿ ಹೆಚ್ಚು ಅಕ್ರಮ ಸಂಪಾದನೆ ಗಳಿಸಿರುವ ಆರೋಪ, ಬಿಡಿಎ ಉಪ ಕಾಯದರ್ಶಿ ಆಗಿದ್ದಾಗ ನೂರಾರು ಸೈಟ್ ಕಬಳಿಸಿರುವ ಆರೋಪಗಳೂ ಇವರ ಮೇಲಿವೆ.