


ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆದಿತ್ತು. ಈ ಜಗಳವೇ ಗೃಹಿಣಿ ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ. ಈ ಘಟನೆ ನಡೆದಿರೋದು ಬೆಂಗಳೂರಿನಲ್ಲಿ. ಪತ್ನಿ ಮೂರು ದಿನದ ಸಾಂಬಾರ್ನ್ನು ಬಡಿಸಿದ್ದಳು. ಈ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದಾನೆ. ಇದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
27 ವರ್ಷದ ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಐದು ವರ್ಷಗಳ ಹಿಂದೆ ಕಾವ್ಯ ರಂಗಸ್ವಾಮಿ ಎಂಬವರನ್ನು ಮದುವೆಯಾಗಿದ್ದಳು. ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಗುರುವಾರ(ಮಾ.05) ಮನೆಯಲ್ಲಿ ಊಟದ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ. ಕಾವ್ಯ ಮೂರು ದಿನಗಳ ಹಿಂದೆ ತಯಾರಿಸಿದ್ದ ಸಾಂಬಾರ್ ಅನ್ನು ಬಿಸಿ ಮಾಡಿ ಪತಿಗೆ ಬಡಿಸಿದ್ದಳು. ಇದೇ ವಿಷಯಕ್ಕೆ ರಂಗಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ‘ಪ್ರತಿದಿನ ಹಳೇ ಸಾಂಬಾರನ್ನೇ ಹಾಕುತ್ತೀಯಾ?’ ಎಂದು ಪ್ರಶ್ನಿಸಿ ಪತ್ನಿಯ ಜೊತೆ ವಾಗ್ವಾದ ನಡೆಸಿದ್ದಾನೆ. ಮನಬಂದಂತೆ ಬೈದಿದ್ದಲ್ಲದೆ, ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂದು ಹೇಳಲಾಗಿದೆ.ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ವಿಷ ಸೇವಿಸಿದ್ದಾಳೆ. ಕಾವ್ಯ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದಾರಿ ಮಧ್ಯೆ ಕಾವ್ಯ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.








