ವಿಟ್ಲ: ನೀರಕಣಿ ಜೆ.ಎಲ್ ಅಡಿಟೋರಿಯಂನಲ್ಲಿ ಸೆಪ್ಟೆಂಬರ್ 2 ಹಾಗೂ 3ರಂದು ಬೃಹತ್ ಸಸ್ಯಮೇಳ, ಆಹಾರ ಮೇಳ, ವಸ್ತು ಪ್ರದರ್ಶನ, ಮಾರಾಟ ಹಾಗೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಪತ್ರಿಕಾ ಗೋಷ್ಠಿ ಕಾರ್ಯಕ್ರಮ ವಿಟ್ಲದ ಪಂಚಮಿ ಭವನದಲ್ಲಿ ನಡೆಯಿತು.
ವಿವಿಧ ತಳಿಯ ಸಸ್ಯಗಳು, ನೂರಕ್ಕೂ ಹೆಚ್ಚಿನ ಸ್ಟಾಲ್ ಗಳು, ಕರಾವಳಿ ಹಲಸಿನ ದೋಸೆ ಸೇರಿದಂತೆ ಸುಮಾರು 60 ಬಗೆಯ ದೋಸೆಗಳು, ಉತ್ತರ ಕನ್ನಡದ ವಿವಿಧ ಖಾದ್ಯಗಳು, ಹಲಸಿನ ಗೋಬಿ ಮಂಚೂರಿ, ಆಟಿ ತಿಂಗಳ ಸ್ಪೆಷಲ್ ತಿಂಡಿಗಳು, ಜೋಳದ ರೊಟ್ಟಿ, ರಾಗಿ ಮುದ್ದೆ, ಧಾರವಾಡ ಕರದಂಟು ಮುಂತಾದ ಸಾಂಪ್ರದಾಯಿಕ ವಿವಿಧ ಶೈಲಿಯ ಖಾದ್ಯಗಳು ಮೇಳದಲ್ಲಿ ಸವಿಯಬಹುದು.
ಮೇಳದಲ್ಲಿ ಸುಮಾರು ಸಾವಿರಕ್ಕೂ ಮೀರಿ ವಿವಿಧ ಬಗೆಯ ಔಷಧೀಯ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಹಣ್ಣಿನ ಗಿಡಗಳು ಲಭ್ಯವಿರುತ್ತದೆ. ಸಂಜೆ ಗಂಟೆ 5 ರಿಂದ ಕರಾವಳಿಯ ಖ್ಯಾತ ಹಿನ್ನಲೆ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ರೂಪ ಪ್ರಕಾಶ್ ಮಹಾದೇವನ್ ತಂಡದವರಿಂದ ಮಾತಿನ ತರುಣ, ಡೈಜಿವರ್ಲ್ಡ್ ವಾಹಿನಿಯ ಖ್ಯಾತ ನಿರೂಪಕ ಚೇತನ್ ಶೆಟ್ಟಿಯವರ ನಿರೂಪಣೆಯಲ್ಲಿ, ಕರಾವಳಿಯ ಪ್ರಸಿದ್ಧ ಸಂಗೀತ ಕಲಾವಿದರ ಕೂಡುವಿಕೆಯೊಂದಿಗೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಎರಡೂ ದಿನವೂ ನಡೆಯಲಿದೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ತುಳು ರಂಗಭೂಮಿ, ಹಾಗೂ ಸಿನಿಮಾ ರಂಗದ ಹಾಸ್ಯ ನಟ, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಭಾಗವಹಿಸಲಿದ್ದಾರೆ. ಹಾಗೂ ಮಾನ್ಯ ಶಾಸಕರು ಅಶೋಕ್ ಕುಮಾರ್ ರೈ ಕೊಡಿಂಬಾಡಿ, ಸ್ಪೀಕರ್ ಯು.ಟಿ ಖಾದರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಜೊತೆಗೆ ಸೆಪ್ಟೆಂಬರ್ 3 ರಂದು ವಿಟ್ಲದ ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಮೇಳದ ಅಧ್ಯಕ್ಷ ಜಯರಾಮ್ ಬುಳೇರಿಕಟ್ಟೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಭರತ್ ಜೈನ್, ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ಮಂಜುನಾಥ ಎಸ್ ವಿಟ್ಲ ಉಪಸ್ಥಿತರಿದ್ದರು