



ನವದೆಹಲಿ: ನಾಲ್ಕು ರಾಜ್ಯಗಳ ನೂತನ ರಾಜ್ಯಾಧ್ಯಕ್ಷರ ಹೆಸರನ್ನು ಬಿಜೆಪಿ ಘೋಷಣೆ ಮಾಡಿದ್ದು, ದೆಹಲಿ, ಪಂಜಾಬ್, ತ್ರಿಪುರ, ಹರಿಯಾಣಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿ ಪಕ್ಷ ಆದೇಶ ಹೊರಡಿಸಿದೆ.
ಕೇಂದ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ಬಲವರ್ಧನೆ, ಮುಂದಿನ ಚುನಾವಣೆಗಳಿಗೆ ಸಿದ್ಧತೆ ನಡೆಯುತ್ತಿದ್ದು, ಪಕ್ಷದ ಸಂಘಟನೆಗೆ ಹೊಸ ಮುಖಗಳನ್ನು ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.
ದೆಹಲಿಗೆ ನೂತನ ಬಿಜೆಪಿ ರಾಜ್ಯಾಧ್ಯಕ್ಷ
ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹರ್ಷ್ ಮಲ್ಹೋತ್ರಾ ಅವರನ್ನು ನೇಮಿಸಲಾಗಿದೆ. ಅವರು ಕೇಂದ್ರ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ರಾಜ್ಯ ಸಚಿವರಾಗಿರುವ ಹರ್ಷ್ ಮಲ್ಹೋತ್ರಾ ಅವರಿಗೆ ರಾಜಕೀಯ ಹಾಗೂ ಆಡಳಿತದ ಅನುಭವವಿದೆ. ದೆಹಲಿ ರಾಜಕೀಯವಾಗಿ ಅತ್ಯಂತ ಪ್ರಮುಖ ಕೇಂದ್ರವಾಗಿರುವುದರಿಂದ, ಇವರ ನೇಮಕಾತಿ ಪಕ್ಷದ ದೃಷ್ಟಿಯಿಂದ ಮಹತ್ವದ್ದಾಗಿದೆ.
ಪಂಜಾಬ್ಗೆ ಕೇವಲ್ ಸಿಂಹ ಡಿಲ್ಲೋ
ಪಂಜಾಬ್ಗೆ ಸರ್ದಾರ್ ಕೇವಲ್ ಸಿಂಹ ಡಿಲ್ಲೋ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದ್ದು, ಪಂಜಾಬ್ನ ರಾಜಕೀಯ ವಾತಾವರಣ, ಅಲ್ಲಿರುವ ಪ್ರಾದೇಶಿಕ ಹಾಗೂ ಧಾರ್ಮಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು, ಸರ್ದಾರ್ ಕೇವಲ್ ಸಿಂಹ ಡಿಲ್ಲೋ ಅವರನ್ನು ನೇಮಿಸಲಾಗಿದೆ.
ತ್ರಿಪುರಕ್ಕೆ ಅಭಿಷೇಕ್ ದೇಬ್ ರಾಯ್ ರಾಜ್ಯಾಧ್ಯಕ್ಷ
ತ್ರಿಪುರಕ್ಕೆ ಶಾಸಕ ಅಭಿಷೇಕ್ ದೇಬ್ ರಾಯ್ ಅವರನ್ನು ಹೊಸ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಅವರು ಈಗಾಗಲೇ ಶಾಸಕರಾಗಿ ಜನಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವ ಕಾರಣ, ತ್ರಿಪುರದಲ್ಲಿ ನೆಲಮಟ್ಟದ ರಾಜಕೀಯ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಉತ್ತರ–ಪೂರ್ವ ಭಾರತದ ಈ ಚಿಕ್ಕ ರಾಜ್ಯದಲ್ಲಿ ಬಿಜೆಪಿ ಕಳೆದ ಕೆಲವು ವರ್ಷಗಳಿಂದ ತನ್ನ ಹಿಡಿತವನ್ನು ಬಲಪಡಿಸಿದೆ.
ಹರಿಯಾಣದ ರಾಜ್ಯಾಧ್ಯಕ್ಷೆಯಾಗಿ ಡಾ.ಅರ್ಚನಾ ಗುಪ್ತಾ
ಹರಿಯಾಣಕ್ಕೆ ಡಾ.ಅರ್ಚನಾ ಗುಪ್ತಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಮಹಿಳಾ ನಾಯಕತ್ವಕ್ಕೆ ಮಣೆ ಹಾಕಿರುವುದು ಮಹಿಳಾ ಕಾರ್ಯಕರ್ತರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








