ವಿಟ್ಲ : ಕಾರ್ಮಿಕರ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸುತ್ತಿರುವ ಬಿಜೆಪಿ ಸರಕಾರ, ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಹೇಳಿದರು.
ವಿಟ್ಲ ಹಾಗೂ ಉಕ್ಕುಡದಲ್ಲಿ ನಡೆದ ಮತಯಾಚನೆ ಸಂದರ್ಭ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಮೂರುವರೆ ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಕಾರ್ಮಿಕರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬೀದಿ ಬದಿ ಕಾರ್ಮಿಕರಿಗೆ ಇ.ಎಸ್.ಐ ಆಸ್ಪತ್ರೆ ಹಾಗೂ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗಿದೆ. ಮಾತ್ರವಲ್ಲ ಮಹಿಳಾ ಕಾರ್ಮಿಕರ ಹಿತಾಸಕ್ತಿಯಿಂದ ಇಲಾಖಾವಾರು ಹಲವು ಯೋಜನೆಗಳನ್ನು ನೀಡಲಾಗಿದೆ. ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ, ಉಚಿತ ಬಸ್ ಪಾಸ್ ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಇದನ್ನು ಖಂಡಿತಾ ಈಡೇರಿಸಲಾಗುವುದು ಎಂದರು.
ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬರಲು ಕರ್ನಾಟಕ ರಾಜ್ಯದ ಚುನಾವಣೆ ಮಹತ್ವಪೂರ್ಣ. ಇಲ್ಲಿನ ಒಂದೊಂದು ಕ್ಷೇತ್ರವೂ ನಿರ್ಣಾಯಕ. ಆದ್ದರಿಂದ ಮತದಾರರ ಒಂದೊಂದು ಮತವೂ ಅಮೂಲ್ಯ ಹಾಗಾಗಿ ಚುನಾವಣೆ ದಿನ ತಪ್ಪದೇ ಬಿಜೆಪಿ ಪರವಾಗಿ ಮತ ಚಲಾಯಿಸಿ. ಬಿಜೆಪಿ ಸರಕಾರದ ಕಾರ್ಮಿಕರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಖಂಡಿತವಾಗಿಯೂ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.