ಕಡಬ: ಕಡಬ ತಾಲೂಕಿನ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಸೇತುವೆ ಸಮೀಪದಿಂದ ಹಗಲು ರಾತ್ರಿ ಎನ್ನದೇ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮರಳು ಸಾಗಾಟಕ್ಕೆ ಕಡಬ ಠಾಣಾ ಎಸ್.ಐ ನೇತೃತ್ವದ ಪೊಲೀಸರ ತಂಡ ಕಡಿವಾಣ ಹಾಕಿದ್ದಾರೆ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಯಾರ ಭಯವೂ ಇಲ್ಲದೇ ರಾಜಾರೋಷವಾಗಿ ಮರಳು ದಂದೆಕೋರರು ಅನುಮತಿ ರಹಿತವಾಗಿ ಮರಳು ಸಾಗಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ ಸ್ಥಳೀಯ ಗ್ರಾ.ಪಂ ಅಧಿಕಾರಿಗಳಾಗಲಿ,ಕಂದಾಯ ಇಲಾಖೆಯಾಗಲಿ ಇದನ್ನು ತಡೆಯುವ ಗೋಜಿಗೆ ಹೋಗಲೇ ಇಲ್ಲ. ಮರಳು ಸಾಗಾಟಗಾರರು ಪೊಲೀಸರ ಹೆಸರನ್ನೇ ದುರ್ಬಲಕೆ ಮಾಡಿಕೊಂಡು ಪಿಕಪ್,ಲಾರಿಗಳಲ್ಲಿ ನಿರಂತರ ಮರಳು ಸಾಗಾಟದಲ್ಲಿ ನಿರತರಾಗಿದ್ದರು.
ಇದೀಗ ಮಿತಿಮೀರಿದ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನದಿಗೆ ಮಾಡಿದ ಅನಧಿಕೃತ ರಸ್ತೆಗಳನ್ನು ಜೆಸಿಬಿ ಮೂಲಕ ಮುಚ್ಚಿಸಿದ್ದಾರೆ. ಠಾಣಾ ವ್ಯಾಪ್ತಿಯ ಎಲ್ಲಾ ಅಕ್ರಮ ಮರಳು ನಿಕ್ಷೇಪಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಅಕ್ರಮ ಮರಳು ಗಾರಿಕೆ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್.ಐ ಎಚ್ಚರಿಕೆಯನ್ನು ನೀಡಿದ್ದಾರೆ.