



ಮುಡಿಪು: ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಲುವಾಗಿ ವಿಜಯೋತ್ಸವ ಆಚರಿಸಿ ಮರಳುತ್ತಿದ್ದ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಉಳ್ಳಾಲ ತಾಲ್ಲೂಕಿನ ಬೋಳಿಯಾರ್ನಲ್ಲಿ ಭಾನುವಾರ ಚೂರಿ ಇರಿದ ಪ್ರಕರಣದಲ್ಲಿ ಒಟ್ಟು 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಜುದ್ದೀನ್ ಅಲಿಯಾಸ್ ಸಾದಿಕ್, ಸರ್ವನ್, ಮುಬಾರಕ್, ಅಶ್ರಫ್ ಮತ್ತು ತಲ್ಲಾತ್ ಎಂಬವರನ್ನು ಇವತ್ತು ಮಧ್ಯಾಹ್ನ ಬಂಧಿಸಿದರೇ, ಇಮ್ರಾನ್ ಮತ್ತು ಕೋಳಿ ಇರ್ಷಾದ್ ಎಂಬವರನ್ನು ಸಂಜೆ ಬಂಧಿಸಿರುವುದಾಗಿ ಮಂಗಳೂರು ಕಮೀಷನರೇಟ್ ಅನುಪಮಾ ಅಗರ್ವಾಲ್ ತಿಳಿಸಿದರು. ಮುಹಮ್ಮದ್ ಶಕೀರ್ ,ಅಬ್ದುಲ್ ರಝಾಕ್, ಅಬೂಬಕರ್ ಸಿದ್ದೀಕ್, ಸವಾದ್, ಮೋನು ಮತ್ತು ಅಬೂಬಕರ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು.
ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತ ಹರೀಶ್ (41) ಹಾಗೂ ನಂದ ಕುಮಾರ್ (24) ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯಕ್ಕೆ ಬಳಸಲಾದ ಆಯುಧವನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.