Saturday, June 28, 2025
spot_imgspot_img
spot_imgspot_img

ಬಾಲಕನ ಅಪಹರಣ ಪ್ರಕರಣ​; ಕೋರ್ಟ್ ಆವರಣದಲ್ಲೇ ಎಡಿಜಿಪಿ ಜಯರಾಂ ಬಂಧನ..!

- Advertisement -
- Advertisement -

ಚೆನ್ನೈ: ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಎಡಿಜಿಪಿ ಜಯರಾಂ ಅವರನ್ನು ಬಂಧಿಸಲಾಗಿದೆ. ಜಯರಾಂ ಐಪಿಎಸ್ ಕರ್ನಾಟಕದ ತುಮಕೂರು ಮೂಲದವರು. ಜಯರಾಂ ಅವರ ಅಧಿಕೃತ ಸರ್ಕಾರಿ ಕಾರಿನಲ್ಲಿ ಬಾಲಕನನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು..

ಹೀಗಾಗಿ ಮದ್ರಾಸ್ ಹೈಕೋರ್ಟ್ ಜಯರಾಮ್​ರನ್ನು ಬಂಧಿಸಲು ನಿನ್ನೆ ಆದೇಶ ಹೊರಡಿಸಿತ್ತು. ಕೋರ್ಟ್ ಆವರಣದಲ್ಲಿ ಜಯರಾಮ್​ರನ್ನು ಬಂಧಿಸಲಾಗಿದೆ. ಬಳಿಕ ಪೊಲೀಸ್ ಠಾಣೆಯಲ್ಲಿ ಒಂದೂವರೆ ಗಂಟೆ ಕಾಲ ಜಯರಾಮ್ ವಿಚಾರಣೆಗೆ ಒಳಪಡಿಸಲಾಗಿದೆ. ಬಂಧನ ಬೆನ್ನಲ್ಲೇ ಜಯರಾಮ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಪೋಷಕರ ವಿರೋಧದ ಮಧ್ಯೆಯೂ 2025ರ ಮೇ ತಿಂಗಳಲ್ಲಿ ಯುವಕ- ಯುವತಿ ಮದುವೆಯಾಗಿದ್ದರು. ಯುವತಿಯ ತಂದೆ ವನರಾಜ, ತನ್ನ ಮಗಳನ್ನು ಆತನಿಂದ ಬೇರ್ಪಡಿಸಿ ವಾಪಸ್ ಕರೆ ತರಲು ನಿರ್ಧರಿಸಿದ್ದ. ಅಂತೆಯೇ ಆತ ಸಸ್ಪೆಂಡ್ ಆಗಿದ್ದ ಪೊಲೀಸ್ ಕಾನ್ಸ್​​ಟೇಬಲ್ ಮಹೇಶ್ವರಿಯ ನೆರವು ಕೇಳಿದ್ದ ಎನ್ನಲಾಗಿದೆ.

ಮಹೇಶ್ವರಿ ಈ ವಿಷಯವನ್ನು ಎಡಿಜಿಪಿ ಜಯರಾಮ್​ಗೆ ತಿಳಿಸಿದ್ದರು. ಆಗ ಎಡಿಜಿಪಿ ಜಯರಾಮ್, ಕೆ.ವಿ.ಕುಪ್ಪ ಕ್ಷೇತ್ರದ ಶಾಸಕ ಪೂವೈ ಜಗನ್ ಮೂರ್ತಿಗೆ ವಿಚಾರ ತಿಳಿಸಿದ್ದಾರೆ. ಶಾಸಕ ಪೂವೈ ಜಗನ್ ಮೂರ್ತಿ, ತನ್ನ ಬೆಂಬಲಿಗರಿಗೆ ಮದುಮಗನ ಕಿಡ್ನ್ಯಾಪ್ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ, ಶಾಸಕರ ಬೆಂಬಲಿಗರು, ಮದುಮಗ ಮನೆಗೆ ಏಕಾಏಕಿ ಎಂಟ್ರಿ ನೀಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಮದುಮಗ ಮನೆಯಲ್ಲಿ ಇರಲಿಲ್ಲ. ಬದಲಾಗಿ ಮದುಮಗನ ಸಹೋದರ ಮನೆಯಲ್ಲಿದ್ದ. ಈತನೇ ಮದುಮಗ ಅಂದುಕೊಂಡ ಅಪಹರಣಕಾರರು, ಅಪ್ರಾಪ್ತನನ್ನು ಅಪಹರಿಸಿದ್ದಾರೆ. ಆಘಾತಕ್ಕೆ ಒಳಗಾದ ಅಪ್ರಾಪ್ತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಬಾಲಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಪಹರಣಕಾರರು, ಬಸ್ ನಿಲ್ದಾಣದ ಬಳಿ ಅಪ್ರಾಪ್ತನನ್ನು ಬಿಟ್ಟು ಪರಾರಿ ಆಗಿದ್ದಾರೆ. ಬಾಲಕನ ಅಪಹರಣಕ್ಕೆ ಎಡಿಜಿಪಿ ಅವರ ಸರ್ಕಾರಿ ಕಾರನ್ನು ಬಳಸಲಾಗಿದೆ ಅನ್ನೋದು ಗಂಭೀರ ಆರೋಪ. ಜೊತೆಗೆ ಕಿಡ್ನ್ಯಾಪ್ ನಂತರ, ಬಾಲಕನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಲು ಕೂಡ ಅದೇ ಕಾರನ್ನು ತಂದಿದ್ದರು. ಕಾರನ್ನು ಅಮಾನತುಗೊಂಡ ಮಹೇಶ್ವರಿ ಅವರೇ ಚಲಾಯಿಸುತ್ತಿದ್ದರು. ಕಾರಿನಲ್ಲಿ ಮದುಮಗಳ ತಂದೆ ಕೂಡ ಇದ್ದರು. ಇದಕ್ಕೆ ಸಾಕ್ಷಿಯಾಗಿ ಸಿಸಿಟಿ ದೃಶ್ಯ ಲಭ್ಯವಾಗಿತ್ತು.

ಸಿಸಿಟಿವಿ ಆಧಾರಿಸಿ ಮದುಮಗಳ ತಂದೆ ವನರಾಜ, ವಕೀಲ ಶರತ್ ಕುಮಾರ್ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಸಸ್ಪೆಂಡ್ ಆಗಿದ್ದ ಪೇದೆ ಮಹೇಶ್ವರಿ, ಎಡಿಜಿಪಿ ಜಯರಾಮ್, ಶಾಸಕ ಪೂವೈ ಜಗನ್ ಮೂರ್ತಿ ಭಾಗಿಯಾಗಿದ್ದಾರೆ ಅಂತಾ ಪೊಲೀಸರು ಮದ್ರಾಸ್ ಹೈಕೋರ್ಟ್​ಗೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಹೈಕೋರ್ಟ್​, ಎಡಿಜಿಪಿ ಜಯರಾಮ್ ಅವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿತ್ತು. ಅಲ್ಲದೇ ಕೂಡಲೇ ಅವರನ್ನು ಬಂಧಿಸುವಂತೆ ಸೂಚನೆ ನೀಡಿತ್ತು. ಅಂತೆಯೇ ನಿನ್ನೆ ಎಡಿಜಿಪಿ ಜಯರಾಂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!