Saturday, July 4, 2026
spot_imgspot_img
spot_imgspot_img

ಉಪ್ಪಿನಂಗಡಿಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ನೂತನ 5ನೇ ಶಾಖೆ ಉದ್ಘಾಟನೆ

- Advertisement -
- Advertisement -

ಜನರ ವಿಶ್ವಾಸ ಉಳಿಸಿಕೊಳ್ಳುವ ಸಹಕಾರಿ ಸಂಘಗಳೇ ಯಶಸ್ಸಿನತ್ತ ಸಾಗುತ್ತವೆ: ಪ್ರತಾಪ ಸಿಂಹ ನಾಯಕ್

ಉಪ್ಪಿನಂಗಡಿ: ವಿಟ್ಲ ಗ್ರಾಮೀಣ ಸಹಕಾರಿ ಸಂಘದ ನೂತನ 5ನೇ ಶಾಖೆಯು ಇಂದು (ಜುಲೈ 4ರಂದು) ಉಪ್ಪಿನಂಗಡಿಯ ಗಾಂಧಿ ಪಾರ್ಕ್‌ನ ರಾಮ ಗೋಪಾಲ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ವಹಿಸಿದರು. ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ದೀಪ ಪ್ರಜ್ವಲನೆ ನೆರವೇರಿಸಿ, ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು, ಸಹಕಾರ ಭಾರತಿ ದ. ಕ ಜಿಲ್ಲೆ ಯ ಉಪಾಧ್ಯಕ್ಷ ಹಾಗೂ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕೆ. ವಿ. ಪ್ರಸಾದ್ ಅವರು ಶಾಖೆಯ ಗಣಕೀಕರಣ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಾಗೂ ನ್ಯಾಯವಾದಿ ಪ್ರತಾಪ ಸಿಂಹ ನಾಯಕ್, ಸಹಕಾರಿ ರಂಗ ಜನರ ವಿಶ್ವಾಸ ಗಳಿಸಿದ ಕ್ಷೇತ್ರ. ಜನರೊಂದಿಗೆ ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡ ಸಂಘಗಳು ಯಶಸ್ವಿ ಪಥದಲ್ಲಿ ಸಾಗುತ್ತವೆ. ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಜನರು ವಿಶ್ವಾಸ ಇಡುವಂತೆ ಸಹಕಾರಿ ಸಂಘಗಳ ನಿರ್ದೇಶಕರ ಮೇಲೂ ನಂಬಿಕೆ ಇಡುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವುದು ಅತ್ಯಗತ್ಯ ಎಂದು ಹೇಳಿದರು.

ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನೌಕರರ ಪ್ರಾಮಾಣಿಕ ಸೇವೆಯಿಂದ ಕುಟುಂಬ ಮಾತ್ರವಲ್ಲ ಪ್ರತಿ ವ್ಯಕ್ತಿ ಯನ್ನು ತಲುಪುವ ಕೆಲಸ ಸಹಕಾರಿ ಸಂಘಗಳಿಂದ ಆಗಿದೆ. ರೈತನ ಆರ್ಥಿಕ ಪರಿಸ್ಥಿತಿ ಯನ್ನು ಮೇಲೆತ್ತುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಬಹು ದೊಡ್ಡ ಪಾತ್ರ ವಹಿಸಿವೆ ಎಂದು ಹೇಳಿದರು. ವಿಟ್ಲ ಗ್ರಾಮೀಣ ಸಹಕಾರಿ ಸಂಘ ಒಳಗೊಂಡಂತೆ ಸಹಕಾರಿ ಸಂಘಗಳು ಇಂದು ಆರ್ಥಿಕ ಶಿಸ್ತು ಮೈಗೂಡಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿವೆ ಎಂದರು.

ರಾಮಗೋಪಾಲ ಕಾಂಪ್ಲೆಕ್ಸ್‌ನ ಕಟ್ಟಡ ಮಾಲಕರಾದ ಕೆ. ರಾಜೇಶ್ ನಾಯಕ್, ಸಂಘದ ಉಪಾಧ್ಯಕ್ಷ ಮನೋರಂಜನ್ ಕೆ.ಆರ್. ಸೇರಿದಂತೆ ನಿರ್ದೇಶಕರು, ಸಿಬ್ಬಂದಿ ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕಿಯರಾದ ಜಯಂತಿ ಎಚ್. ರಾವ್ ಮತ್ತು ಶುಭಲಕ್ಷ್ಮೀ ರಾವ್ ಪ್ರಾರ್ಥಿಸಿದರು. ನಿರ್ದೇಶಕ ಮೋಹನ್ ಕೆ.ಎಸ್. ಸ್ವಾಗತಿಸಿ ಪ್ರಸ್ತಾವನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ವಂದಿಸಿದರು. ಮಹೇಶ್ ಕುಮಾರ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!