ನವದೆಹಲಿ: ಕರೋನಾದದಿಂದ ಕಂಗೆಟ್ಟಿರುವ ದೇಶದ ಅರ್ಥಿಕ ಪರಿಸ್ಥಿತಿಯ ನಡುವೆ 2021-22ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡನೆ ಮಾಡಿದರು. ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, 15 ವರ್ಷ ಹಳೆಯ ವಾಹನಗಳನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ಹಳೆಯ ವಾಹನ ಸವಾರರಿಗೆ ಗ್ರೀನ್ ಟ್ಯಾಕ್ಸ್ ತೆರಿಗೆಯನ್ನು ಪರಿಚಯಿಸುವ ಮೂಲಕ, ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಇದೀಗ ಇಂದು ಮಂಡನೆಯಾದಂತ ಕೇಂದ್ರ ಬಜೆಟ್ ವೇಳೆಯಲ್ಲಿ 15 ವರ್ಷದ ಹಳೆಯ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಗುಜರಿಗೆ ವಾಹನ ಸವಾರರೇ ಹಾಕುವಂತ ಯೋಜನೆಯನ್ನು ಪರಿಚಯಿಸಿದೆ. ಈ ಮೂಲಕ ವಾಹನ ಸವಾರರೇ ಹಳೆಯ ವಾಹನಗಳನ್ನು ಗುಜರಿಗೆ ಸ್ವಯಂ ಪ್ರೇರಿತವಾಗಿ ಹಾಕುವಂತೆ ಪ್ರೋತ್ಸಾಹಿಸಿದೆ.
ಅಲ್ಲದೇ ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುತ್ತೇವೆ. ವೈಯಕ್ತಿಕ ವಾಹನಗಳಿಗೆ 20 ವರ್ಷ ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷದ ಬಳಕೆ ಮಿತಿ ವಿಧಿಸಲಾಗುವುದು. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಶೀಘ್ರ ಪ್ರಕಟಿಸುತ್ತೇವೆ ಎಂದು ಪ್ರಕಟಿಸಿದರು. ಈ ಮೂಲಕ ಹಳೆ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದಾರೆ.
ಹಳೆಯ ವಾಹನಗಳನ್ನು ನಾಶಪಡಿಸಿರುವುದರಿಂದ ಇಂಧನ ಕ್ಷಮತೆ, ವಾಯುಮಾಲಿನ್ಯ ನಿಯಂತ್ರಣ ಸೇರಿದಂತೆ ಹಲವಾರು ಲಾಭಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ತೈಲ ಆಮದನ್ನು ಕಡಿಮೆ ಮಾಡಬಹುದು. ಈ ಮೂಲಕ ಆರ್ಥಿಕತೆ ಸುಧಾರಣೆಯಾಗಲಿದೆ. ಜತೆಗೆ ವಾಹನಗಳ ಸಾಮಥ್ರ್ಯ ದೃಢೀಕರಣಕ್ಕೆ ನೂತನ ವ್ಯವಸ್ಥೆಯನ್ನು ಅಳವಡಿಸುವುದಾಗಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ.