ಪುತ್ತೂರು ಕ್ಷೇತ್ರದ ಅಭಿವೃದ್ದಿಯನ್ನು ಕಂಡು ಬಿಜೆಪಿಗರಿಗೆ ತಲೆ ತಿರುಗುತ್ತಿದೆ: ಎಂ ಎಸ್ ಮಹಮ್ಮದ್
ಪುತ್ತೂರು: ಶಾಸಕರಾಗಿ ಕಳೆದ ಏಳು ತಿಂಗಳಲ್ಲಿ ಅಶೋಕ್ ಕುಮಾರ್ ರೈಯವರು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಕಂಡು ಬಿಜೆಪಿಗರಿಗೆ ತಲೆತಿರುಗಿದಂತಾಗಿದ್ದು, ಅಭಿವೃದ್ದಿಯನ್ನು ಕಂಡು ಸಹಿಸಲಾಗದ ಬಿಜೆಪಿಯವರು ಶಾಸಕರು ಮಾಡಿರುವ ಕೆಲಸವನ್ನು ನಾವು ಮಾಡಿದ್ದು ಎಂದು ಹೇಳುತ್ತಿದ್ದು ಇದು ನಾಚಿಕೇಡಿನ ಸಂಗತಿಯಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಹೇಳಿದರು.
ಅವರು ಬಲ್ನಾಡು ಗ್ರಾಮದ ಬುಳೇರಿಕಟ್ಟೆ-ಸಾಜ ಕುದ್ದುಪದವು ಲೋಕೋಪಯೋಗಿ ರಸ್ತೆಗೆ ರೂ. 1.80 ಕೋಟಿ ರೂ. ವೆಚ್ಚದಲ್ಲಿ ಡಾಮರೀಕರಣಕ್ಕೆ ಶಾಸಕರು ಅನುದಾನ ಬಿಡುಗಡೆ ಮಾಡಿದ್ದು ಇದರ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ವೋಟಿನ ಆಸೆಯಿಂದ ಸಿಕ್ಕಸಿಕ್ಕಲ್ಲೆಲ್ಲಾ ಮಾಜಿ ಶಾಸಕರು ಅನುದಾನ ಇಲ್ಲದೇ ಇದ್ದರೂ ಗುದ್ದಲಿಪೂಜೆ ಮಾಡಿ ಹೋಗಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವ ಶಾಸಕರು ಅನುದಾನವನ್ನು ತಂದು ಅದೇ ರಸ್ತೆಯನ್ನು ಅಭಿವೃದ್ದಿ ಮಾಡುತ್ತಿದ್ದು ಈಗ ಬರುತ್ತಿರುವ ಅನುದಾನ ಸಿದ್ದರಾಮಯ್ಯ ಸರಕಾರದ ಅನುದಾನವಾಗಿದೆ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು. ಅಶೋಕ್ ರೈಯವರು ಮಾಡಿದ ಸಾಧನೆಯನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ, ಶಾಸಕರಾಗಿದ್ದ ವೇಳೆ ಅಭಿವೃದ್ದಿ ಕೆಲಸ ಮಾಡದೆ ಜಾತಿ, ಧರ್ಮದ ಹೆಸರಿನಲ್ಲಿ ದೊಂಬರಾಟ ನಡೆಸಿದ್ದ ಬಿಜೆಪಿಗರಿಗೆ ಅಭಿವೃದ್ದಿ ಏನು ಎಂಬುದನ್ನು ಪುತ್ತೂರಿನ ಶಾಶಕರು ತೋರಿಸಿಕೊಟ್ಟಿದ್ದಾರೆ, ರಾಜಕೀಯ ಬಿಟ್ಟು ಶಾಸಕರಿಗೆ ಬಿಜೆಪಿ ಬೆಂಬಲ ನೀಡಬೇಕು ಎಂದು ಎಂ.ಎಸ್ ಆಗ್ರಹಿಸಿದರು.
ಸಾರ್ಯ ಕೋಡಿಯಡ್ಕ ಪ.ಜಾತಿ ಕಾಲನಿ ರಸ್ತೆಗೆ 10 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರ ಗುದ್ದಲಿಪೂಜೆಯನ್ನು ಶಾಸಕರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಲ್ನಾಡು ಕಾಂಗ್ರೆಸ್ ವಲಯಾಧ್ಯಕ್ಷ ಚಂದಪ್ಪ ಪೂಜಾರಿ, ಬಲ್ನಾಡು ಬೂತ್ ಅಧ್ಯಕ್ಷ ನವೀನ್ ಕರ್ಕೆರ, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬುಳೇರಿಕಟ್ಟೆ ಪಪೂ ಕಾರ್ಯಾಧ್ಯಕ್ಷ ಪ್ರಕಾಶ್ ಚಂದ್ರ ಆಳ್ವ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ಮಹಮ್ಮದ್ ಶರೀಫ್ ರೋಯಲ್, ಬೂತ್ನ ಅಧ್ಯಕ್ಷ ಕೆ.ಬಿ ಆಶ್ರಫ್, ಗ್ರಾಪಂ ಮಾಜಿ ಸದಸ್ಯ ಇದ್ದಿಕುಂಞಿ, ಜಗನ್ನಾಥ ರೈ, ಅಶೋಕ್ ಪಣೆತ್ತಡ್ಕ, ಇಲ್ಯಾಸ್ ಮಲ್ತಿಕಲ್ಲು, ಸಂಜೀವ ಪೂಜಾರಿ, ಜತ್ತಪ್ಪ ಪೂಜಾರಿ, ಕುಂಞಿ ಸಾರ್ಯ, ಉಮೇಶ್ ಪಣೆತ್ತಡ್ಕ, ಚನಿಯಪ್ಪ ಕೂಟೇಲು, ಹಮೀದ್ ಸಾಜ, ಅಬ್ದುಲ್ ರಹಿಮಾನ್ ಸಾರ್ಯ, ಸಂಜೀವ ಸಾರ್ಯ ಮೊದಲಾದವರು ಉಪಸ್ಥಿತರಿದ್ದರು.