





ಪುತ್ತೂರು: ಉದ್ಯಮಿ, ಕೃಷಿಕ, ರಾಜಕೀಯ ಕಾರ್ಯಕರ್ತ ರಾಜರಾಮ್ ಭಟ್ ಎಡಕ್ಕಾನ ಅವರು ವಿದೇಶದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕದ ನಿವಾಸಿಯಾದ ಎಡಕ್ಕಾನ ರಾಜರಾಮ್ ಭಟ್ ಅವರು ದುಬೈಯಲ್ಲಿ ಭಾರತೀಯ ಕಾಲಮಾನ ಮುಂಜಾನೆ 3 ಗಂಟೆಗೆ ಹೃದಯಾಘಾತದಿಂದ ನಿಧನರಾದರು.
ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮೃತರು ತಾಯಿ ಲಕ್ಷ್ಮೀ ಪತ್ನಿ, ಪುತ್ರ ಶ್ಯಾಮ, ಓರ್ವ ಪುತ್ರಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ. ದುಬೈನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಭಾರತಕ್ಕೆ ತರಲಾಗುವುದು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಇವರು, ಕಳೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿದಾಗ ಅವರ ಜೊತೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಚುನಾವಣೆಯ ಬಳಿಕವೂ ಅರುಣ್ ಪುತ್ತಿಲ ಅವರು ಪುತ್ತಿಲ ಪರಿವಾರ ಎಂಬ ಸಾಮಾಜಿಕ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದಾಗ, ಅದರ ಜೊತೆಯೂ ಗುರುತಿಸಿಕೊಂಡಿದ್ದರು.
ಆದರೆ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅರುಣ್ ಪುತ್ತಿಲ ಅವರು ಪುತ್ತಿಲ ಪರಿವಾರವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದಾಗ, ರಾಜರಾಮ್ ಭಟ್ ಅವರೊಂದಿಗೆ ಮುನಿಸಿಕೊಂಡು ದೂರವಾಗಿದ್ದರು. ರಘುಪತಿ ಭಟ್ ಅವರು ಬಿಜೆಪಿಯಿಂದ ಬಂಡೆದ್ದು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದಾಗ, ಅವರ ಪಾಳಯ ಸೇರಿದ್ದ ರಾಜರಾಮ್ ಭಟ್ ಅವರು ಸುಳ್ಯ ಮತ್ತು ಪುತ್ತೂರಿನಲ್ಲಿ ಅವರ ಪರವಾಗಿ ಮತಯಾಚಿಸಿದ್ದರು.
ಆ ಬಳಿಕ ಅವರು ‘ಭಾರತೀಯ ಜನಹಿತ ಪರಿವಾರ ಎಂಬ ಸಂಘಟನೆಯನ್ನು ರೂಪಿಸಲು ಯತ್ನಿಸಿದರಾದರೂ. ಅದರಲ್ಲಿ ಅವರಿಗೆ ಯಶಸ್ಸು ದಕ್ಕಿರಲಿಲ್ಲ. ಮೂರು ತಿಂಗಳ ಹಿಂದೆ ತಮ್ಮ ಸ್ವಗ್ರಾಮದಲ್ಲಿ ಕೊರತ್ತಿ ದೈವದೊಂದಿಗೆ ವಾಗ್ವಾದ ನಡೆಸುತ್ತಿದ್ದ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.