ಸ್ಮಾರ್ಟ್ ಸಿಟಿ ಯೋಜನೆಯಡಿ 17 ಕೋಟಿ ವೆಚ್ಚದಲ್ಲಿ ರಥಬೀದಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಬಹತೇಕ ಪೂರ್ಣಗೊಂಡಿದೆ. ಹಾಗಾಗಿ ನಾಳೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಸ್ತೆ ಕಾಂಕ್ರೀಟೀಕರಣ ಬಹುತೇಕ ಪೂರ್ಣಗೊಂಡಿದೆ. ಚರಂಡಿ ಹಾಗೂ ಮೆಸ್ಕಾಂ ಸಂಬಂಧಪಟ್ಟ ಕಾಮಗಾರಿಗಳು ಪೂರ್ಣಗೊಳಿಸುವುದು ಬಾಕಿಯುಳಿದಿದೆ. ಹಾಗಾಗಿ ಸಾರ್ವಜನಿಕರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು ಎಂದರು.
ಈ ಪರಿಸರದ ಜನರು ಕಾಮಗಾರಿ ವೇಳೆ ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಸಹಕರಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಬಾಕಿಯುಳಿದಿರುವ ಮೆಸ್ಕಾಂ ಹಾಗೂ ಚರಂಡಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಆದಷ್ಟು ಬೇಗನೇ ಉಳಿದ ಕಾಮಗಾರಿ ಪೂರ್ಣಗೊಳಿಸಿ ಒಂದು ವಾರದೊಳಗೆ ಎಲ್ಲಾ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯ ಮನಪಾ ಸದಸ್ಯೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷೆ ಪೂರ್ಣಿಮಾ, ಬಿಜೆಪಿ ಮುಖಂಡರಾದ ಮುರಳಿಧರ್ ನಾಯಕ್, ರಮೇಶ್ ಹೆಗ್ಡೆ, ಹರಿ ಪ್ರಸಾದ್, ನಾಗರಿಕ ಹಿತ ರಕ್ಷಣಾ ಸಮಿಯ ಅದ್ಯಕ್ಷರಾದ ಹನುಮಂತ್ ಕಾಮತ್, ಸ್ಮಾರ್ಟಿ ಸಿಟಿ ಅಧಿಕಾರಿಗಳಾದ ಲಿಂಗೇಗೌಡ, ಅರುಣ್ ಪ್ರಭಾ, ಮೆಸ್ಕಾಂ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.