ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಭಾರೀ ಸದ್ದು ಮಾಡತ್ತಾ ಇದೆ.,ಕರ್ನಾಟಕದ ಪ್ರವಾಸಿ ತಾಣಗಳ ಮೇಲೆ ಕರ್ನಾಟಕ ಪೊಲೀಸರು ಒಂದು ಕಣ್ಣಿಟ್ಟಿದ್ದಾರೆ. ಚಿಕ್ಕಮಗಳೂರು ಪ್ರವಾಸಿ ತಾಣ ಆಗಿರುವುದರಿಂದ , ಇಲ್ಲಿ ಹೋಂ ಸ್ಟೇಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಒಂದು ವೇಳೆ ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯದ ಕೇಸ್ ಕಂಡು ಬಂದರೆ ಹೋಂ ಸ್ಟೇ ಮಾಲೀಕರೆ ಹೊಣೆ ಹೊರಬೇಕಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಪ್ರವಾಸಿ ತಾಣಗಳಲ್ಲಿರುವ ಹೋಂ ಸ್ಟೇಗಳ ಬಗ್ಗೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ ಎಂದಿರುವ ಪ್ರವೀಣ್ ಸೂದ್ ಅವರು, ಹೋಂ ಸ್ಟೇನಲ್ಲಿ ಮಾದಕ ದ್ರವ್ಯ ಇರುವ ಬಗ್ಗೆ ಕೇಸ್ ಬಂದರೆ ಅದಕ್ಕೆ ಮಾಲೀಕರೆ ಹೊಣೆಯಾಗುತ್ತಾರೆ. ಮಾದಕ ದ್ರವ್ಯಗಳ ಬಗ್ಗೆ ಹೋಂ ಸ್ಟೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರೆ ಅವರಿಗೆ ಬಹುಮಾನ ಕೊಡುತ್ತೇವೆ. ಪ್ರಕರಣ ಮುಚ್ಚಿ ಹಾಕಿದ್ರೆ ಹೋಂ ಸ್ಟೇ ಮಾಲಿಕರ ವಿರುದ್ಧವೂ ಕ್ರಮ ಕೈಗೊಳ್ಳುತ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಡ್ರಗ್ಸ್ ಕಂಟ್ರೋಲ್ ಮಾಡೋದು ವಿಶೇಷ ವಿಂಗ್ ಮಾತ್ರವಲ್ಲ ಎಂದಿರುವ ಪ್ರವೀಣ್ ಸೂದ್, ಪ್ರತಿಯೊಂದು ಠಾಣೆಯ ಕೆಲಸ. ಯಾವ ಠಾಣಾ ವ್ಯಾಪ್ತಿಯಲ್ಲೂ ಡ್ರಗ್ಸ್ ಹಾವಳಿ ಇರಬಾರದು ಎಂದರು.ಕೋವಿಡ್ ನಿಯಂತ್ರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ. ಅವರಿಗೆ ಅಭಿನಂದನೆ ಹೇಳಲು ಚಿಕ್ಕಮಗಳೂರಿಗೆ ಬಂದಿದ್ದೇನೆ ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿದರು.