ಬೆಂಗಳೂರು: ರಾಜ್ಯ ರಾಜಕೀಯವನ್ನೇ ಬುಡಮೇಲು ಮಾಡುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧ ಇಂದು ಸಂತ್ರಸ್ಥೆ ಎನ್ನಲಾದ ಯುವತಿ ಕೋರ್ಟ್ಗೆ ಹಾಜರಾಗಲು ಅನುಮತಿಯನ್ನು ಕೋರಿದ್ದು ಕೋರ್ಟ್ಗೆ ಹಾಜರಾಗಲು ಕ್ಷಣಗಣನೆ ಆರಂಭವಾಗಿದೆ.

ಆಕೆ ನೀಡುವಂತ ಹೇಳಿಕೆ, ಈಗ ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೂ ಮುಂಚೆ ಹೈಕೋರ್ಟ್ನ ಮುಖ್ಯ ನ್ಯಾಯಧೀಶರಿಗೆ ಇಮೇಲ್ ಮೂಲಕ ಪತ್ರವನ್ನು ರವಾನಿಸಿದ್ದಳು.

ಯುವತಿಯ ಜೊತೆ ಬೇರೆ ವಕೀಲರು ಬರುತ್ತಿದ್ದಾರೆ ಎಂದು ಸಿಡಿ ಲೇಡಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ. ಯುವತಿ ಹಾಜರಾಗುವ ಸಾಧ್ಯತೆ ಹಿನ್ನೆಲೆ ನೃಪತುಂಗ ರಸ್ತೆಯ ಎಸಿಎಂಎಂ ಕೋರ್ಟ್ ಬಳಿ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ನ ಮುಂಭಾಗ ಮುನ್ನೂರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡು ಕೆಎಸ್ಆರ್ಪಿ ತುಕಡಿಯೂ ಮೊಕ್ಕಾಂ ಹೂಡಿದೆ. ಯುವತಿ ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಕೂಡ ಕೋರ್ಟ್ ಬಳಿ ದೌಡಾಯಿಸಿದ್ದಾರೆ.

ಇತ್ತ ಸೋಮವಾರ ಬೆಳಗ್ಗೆ 10 ಗಂಟೆಗೆ ರಮೇಶ್ ಜಾರಕಿಹೊಳಿ ಆಡುಗೋಡಿಯ ಟೆಕ್ನಿಕಲ್ ಸೆಂಟರ್ಗೆ ಆಗಮಿಸಿದ್ದು, ಎಸ್ಐಟಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ 2 ಬಾರಿ ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದಿರುವ ಎಸ್ಐಟಿ, ಇದೀಗ ಮೂರನೇ ಬಾರಿ ವಿಚಾರಣೆ ನಡೆಸುತ್ತಿದೆ.

ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸದ ಬಳಿಯೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ನಿನ್ನೆ-ಮೊನ್ನೆ ರಮೇಶ್ ಜಾರಕಿಹೊಳಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದ್ದರು. ಹಾಗಾಗಿ ಹೆಚ್ಚಿದ ಭದ್ರತೆ ಮಾಡಲಾಗಿದೆ.

