ಚಿಕ್ಕಬಳ್ಳಾಪುರ(ಅ.23): ರಾತ್ರಿ ಸುರಿದ ಮಳೆಯಿಂದಾಗಿ ಮನೆಯೊಂದು ಕುಸಿದು ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ ನಡೆದಿದೆ. ರವಿಕುಮಾರ್(40) ಮತ್ತು ರಾಹುಲ್(15) ಮೃತ ದುರ್ದೈವಿಗಳು.ತಡರಾತ್ರಿ ಸುರಿದ ಮಳೆಯಿಂದಾಗಿ ಮುಂಜಾನೆ 6:30ಕ್ಕೆ ಅಚಾನಕ್ಕಾಗಿ ಚಪ್ಪಡಿಕಲ್ಲಿನ ಮನೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಅವಶೇಷಗಳು ಉರುಳಿ ಬಿದ್ದಿವೆ. ಶಬ್ಧ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು, ಅಗ್ನಿಶಾಮಕದಳ ಸಿಬ್ಬಂದಿಯೊಂದಿಗೆ ಸೇರಿ ಕುಟುಂಬಸ್ಥರನ್ನು ಹೊರತೆಗೆದಿದ್ದಾರೆ.
ನಂತರ ಗಾಯಾಳುಗಳಾದ ರವಿಕುಮಾರ್(40) ಮುನಿರಾಜಮ್ಮ(35) ರುಚಿತ(12) ಹಾಗೂ ರಾಹುಲ್(15) ನನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ತಂದೆ ರವಿಕುಮಾರ್ ಹಾಗೂ ಪುತ್ರ ರಾಹುಲ್ ಮೃತಪಟ್ಟಿದ್ದಾರೆ. ತಾಯಿ ಮುನಿರಾಜಮ್ಮ ಹಾಗೂ ಮಗಳು ರುಚಿತಾಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯ ಶಾಸಕ ಎಂ.ಕೃಷ್ಣಾರೆಡ್ಡಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವಂತೆ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.