ಚಿಕ್ಕಮಗಳೂರು: ಅಣ್ಣನನ್ನು ಕಾಪಾಡಲು ತಮ್ಮ. ತಮ್ಮನನ್ನು ಕಾಪಾಡಲು ಮತ್ತೊಬ್ಬ ಅಣ್ಣ. ಹೀಗೆ ಒಬ್ಬರನೊಬ್ಬರು ಕಾಪಾಡಲು ಹೋಗಿ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ನೀರುಪಾಲಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಹರೇಕೆರೆಯಲ್ಲಿ ನಡೆದಿದೆ.
ಮೃತರೆಲ್ಲರೂ 20 ರಿಂದ 24 ವರ್ಷದ ಯುವಕರಾಗಿದ್ದು, ಮೃತರ ಯುವಕರನ್ನು ಸುದೀಪ್, ಸಂದೀಪ್, ದಿಲೀಪ್, ರಘು ಹಾಗೂ ದೀಪಕ್ ಎಂದು ಗುರುತಿಸಲಾಗಿದೆ. ನವೆಂಬರ್ 20ರಂದು ಸಂದೀಪ್ ಅಕ್ಕ ಸಂಧ್ಯಾಳ ಮದುವೆಯಾಗಿತ್ತು. ಮೊನ್ನೆ ತಾನೇ ಬೀಗರ ಊಟದ ಕಾರ್ಯಕ್ರಮವೂ ಮುಗಿದಿತ್ತು. ನಿನ್ನೆ ಅಕ್ಕನನ್ನು ಬಾವನ ಮನೆಗೆ ಕಳಿಸಿ ಮದುವೆ ನಂತರದ ಕಾರ್ಯದಲ್ಲಿ ತೊಡಗಿದ್ದರು. ಬೀಗರ ಊಟಕ್ಕೆ ತಂದಿದ್ದ ಪಾತ್ರೆಗಳನ್ನು ವಾಪಸ್ ಕೊಡಲು ತಯಾರಾಗಿದ್ದರು.
ಹೀಗೆ ಪಾತ್ರೆ ಕೊಡಲು ಹೋಗಿದ್ದರೆ ಐವರು ಯುವಕರು ಸಾವಿನಿಂದ ಪಾರಾಗುತ್ತಿದ್ದರೋ ಏನೋ. ಆದರೆ ವಿಧಿ ಅವರನ್ನು ಸಾವಿನ ಮನೆಗೆ ದೂಡಿದೆ. ಕೆರೆಯಲ್ಲಿ ಮೀನು ಹಿಡಿದು ತಂದು ಅಡುಗೆ ಮಾಡಿ ಊಟದ ಬಳಿಕ ಪಾತ್ರೆ ಕೊಡಲು ಹೋಗೋಣವೆಂದು ಐವರು ಅಣ್ಣತಮ್ಮಂದಿರು ಕೆರೆಗೆ ಹೋಗಿದ್ದಾರೆ. ಮೀನಿಗೆ ಗಾಳ ಹಾಕುವ ಮುನ್ನ ಈಜಲು ನೀರಿಗೆ ಇಳಿದಿದ್ದಾರೆ. ಆದರೆ ಸುಮಾರು 30 ಅಡಿ ಆಳವಿದ್ದ ಕಾರಣ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಅವನನ್ನ ರಕ್ಷಿಸಲು ಮತ್ತೊಬ್ಬ ನೀರಿಗಿಳಿದಿದ್ದಾನೆ.
ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಒಟ್ಟು ಆರು ಜನ ನೀರಿಗೆ ಇಳಿದಿದ್ದಾರೆ. ಆದರೆ ಬಾನು ಎಂಬುವನು ಈಜಿ ದಡಸೇರಿದ್ದಾನೆ. ದಡದಲ್ಲಿದ್ದ ಬಾನು ಮಕ್ಕಳು ನೀರಿಗೆ ಬರುತ್ತಾವೆಂದು ಆತ ದಡಕ್ಕೆ ವಾಪಸ್ ಬಂದಿದ್ದಾನೆ. ಉಳಿದ ಐವರು ಯುವಕರು ನೋಡ-ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಮನೆಯವರು ಕೆರೆ ಬಳಿ ಹೋದಾಗ ಮೃತ ಸಂದೀಪ್ ಪ್ರೀತಿಯಿಂದ ಸಾಕಿದ್ದ ನಾಯಿ ಡ್ಯಾನಿ ಕೂಡ ಮಾಲೀಕನಿಗಾಗಿ ಕೆರೆ ಬಳಿ ಅನಾಥನಂತೆ ಕೂತಿತ್ತು. ಕೊನೆಗೆ ಸಂದೀಪ್ ಮೃತದೇಹ ಸಿಕ್ಕ ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ತರುವಾಗ ನಾಯಿ ಅಂಬುಲೆನ್ಸ್ ಹಿಂದೆ ಮಗುವಂತೆ ಓಡಿ ಬಂದಿದ್ದು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿತ್ತು.ಈ ಐವರು ಯುವಕರಲ್ಲಿ ಒಂದೇ ಕುಟುಂಬದ ಮೂರು ನೀರುಪಾಲಾಗಿರೋದು ಮತ್ತೊಂದು ಮಹಾ ದುರಂತ. ಮದುವೆಗಾಗಿ ಸಂಬಂಧಿಗಳ ಮನೆಗೆ ಬಂದಿದ್ದ ತಾಲೂಕಿನ ಹಂಚರವಳ್ಳಿ ಗ್ರಾಮದ ಕೃಷ್ಣಮೂರ್ತಿ-ಕುಸುಮ ದಂಪತಿಯ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ. ಸಂತೋಷದಿಂದ ಅಕ್ಕನ ಮದುವೆ ಮಾಡಿ ದಿಲೀಪ್, ದೀಪಕ್ ಮತ್ತು ಸುದೀಪ್ ಅಕ್ಕ ಗಂಡನಮನೆ ಸೇರುತ್ತಿದ್ದಂತೆ ಇತ್ತ ತಮ್ಮಂದಿರು ಸಾವಿನ ಮನೆ ಸೇರಿದ್ದಾರೆ.