ನವದೆಹಲಿ: ಸುಪ್ರೀಂಕೋರ್ಟ್ನ ನೂತನ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟಿಸ್ ಎನ್.ವಿ ರಮಣ ರವರು ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತದ 48ನೇ ಸಿಜಿಐ ಆಗಿ ರಮಣ ರವರು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಭೋದಿಸಿದರು.
ಈ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಪ್ರಮಾಣವಚನದಲ್ಲಿ ಭಾಗಿಯಾದರು.
ಹಿಂದಿನ ಸಿಜೆಐ ಎಸ್.ಎ ಬೋಬ್ಡೆಯವರು ನಿನ್ನೆ ನಿವೃತ್ತಿ ಹೊಂದಿದದರು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ವರ್ಚುವಲ್ ಕಾರ್ಯಕ್ರಮದ ಮೂಲಕ ಅವರನ್ನು ಬೀಳ್ಕೊಟ್ಟಿತು.
ಪ್ರಸ್ತುತ ಬೋಬ್ಡೆ ಯವರ ನಂತರ ಸುಪ್ರೀಂಕೋರ್ಟ್ನಲ್ಲಿ ಅತ್ಯಂತ ಹಿರಿಯ ಜಡ್ಜ್ ಆಗಿರೋರು ನ್ಯಾ. ಎನ್.ವಿ ರಮಣ. ಹೀಗಾಗಿ ಬೋಬ್ಡೆ ಅವರು ತಮ್ಮ ಉತ್ತರಾಧಿಕಾರಿಯಾಗಿ ರಮಣ ಅವರ ಹೆಸರನ್ನ ಶಿಫಾರಸ್ಸು ಮಾಡಿದ್ದರು. ರಮಣ ಅವರಿಗೆ 2022 ಆಗಸ್ಟ್ 6ರವರೆಗೆ ಅಂದ್ರೆ ಒಂದು ವರ್ಷ 4 ತಿಂಗಳ ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲು ಅವಧಿ ಇರಲಿದೆ.
ಆಂಧ್ರಪ್ರದೇಶದ ಕೃಷಿ ಹಿನ್ನೆಲೆಯ ಕುಟುಂಬದವರಾದ ನುಥಲಪತಿ ವೆಂಕಟ ರಮಣ ಅವರು 1957ರ ಆಗಸ್ಟ್ 27ರಂದು ಜನಿಸಿದರು. 2000 ಇಸವಿಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಬಳಿಕ ದೆಹಲಿ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದರು. ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿಯೂ ರಮಣ ಅವರು ಸೇವೆ ಸಲ್ಲಿಸಿದ್ದಾರೆ.