




ದಿಸ್ಪುರ್: ನೀಟ್ ಪೇಪರ್ ಸೋರಿಕೆ ವಿಚಾರವಾಗಿ ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿದ ಪ್ರತಿಭಟನೆಯ ಕಿಚ್ಚು ದೇಶದೆಲ್ಲೆಡೆ ಹಬ್ಬಿದೆ. ಅಸ್ಸಾಂನ ಗುವಾಹಟಿಯ ಚಾಚಲ್ನಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆಯಲ್ಲಿ ಅಸ್ಸಾಂ ಕಂದಾಯ ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಸಾ ಮಹಾಂತ್ ಭಾಗವಹಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲಿ ಅವರು ಘೋಷಣಾ ಫಲಕಗಳನ್ನು ಹಿಡಿದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸೆರೆಯಾಗಿದೆ.
ಕೇಶಬ್ ಮಹಾಂತ್ ಅವರು ಅಸ್ಸಾಂ ಗಣ ಪರಿಷತ್ನ (ಎಜಿಪಿ) ಹಿರಿಯ ನಾಯಕರಾಗಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಎಜಿಪಿ – ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಹೀಗಿದ್ದು ಸಚಿವರ ಮಗಳು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನೆ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಸರ್ಕಾರವು ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಗೌರವಿಸುತ್ತದೆ. ನಮ್ಮ ಪ್ರಧಾನಿ ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.








