ರಾಮನಗರ: ರಾಮನಗರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗವಹಿಸಿದ್ದ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಹೊಡೆದಾಟಕ್ಕೆ ಮುಂದಾದ ಪ್ರಸಂಗ ನಡೆಯಿತು.
ಸಚಿವ ಡಾ.ಅಶ್ವತ್ಥ್ ಭಾಷಣಕ್ಕೆ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ನಮ್ಮ ಕಾಲದಲ್ಲೇ ಅಡಿಗಲ್ಲು, ನಮ್ಮ ಕಾಲದಲ್ಲೇ ಉದ್ಘಾಟನೆ’ ‘ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ’ ಎಂದು ಅಶ್ವತ್ಥ್ ನಾರಾಯಣ ಭಾಷಣ ಮಾಡಿದ್ದಾರೆ. ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಮ್ಮ ಅಭಿವೃದ್ಧಿ ಮಾಡಿಕೊಳ್ಳುವುದನ್ನು ಮಾತ್ರ ಮಾಡಿಕೊಳ್ಳಲ್ಲ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ ಜತೆ ಡಿ.ಕೆ.ಸುರೇಶ್ ವಾಕ್ಸಮರ ನಡೆದಿದೆ.
ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ‘ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು’ ಎಂದು ಪ್ರಚೋದಿಸಿದರು.
ಇದರಿಂದ ಕುಪಿತಗೊಂಡ ಸುರೇಶ್ ‘ನನ್ನ ಗಂಡಸುತನ ತೋರಿಸಲಾ’ ಎಂದು ಅಶ್ವತ್ಥ ರಾಯಣರತ್ತ ನುಗ್ಗಿದರು. ಸಚಿವ ಅಶ್ವತ್ಥನಾರಾಯಣ ಸಹ ಕೆರಳಿದರು. ನಂತರ ಇಬ್ಬರು ಕೈ ಕೈ ಮಿಲಾಯಿಸಲು ಮುಂದಾದರು. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರವಿ ಮೈಕ್ ಕಿತ್ತೆಸೆದರು. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಯಿತು. ಸಚಿವ ಅಶ್ವತ್ಥ್ ಭಾಷಣ ವಿರೋಧಿಸಿ ಕೈ ಸಂಸದ ಡಿ.ಕೆ.ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು.