🖊️ರಾಧಾಕೃಷ್ಣ ಎರುಂಬು




ಮುದ ನೀಡುವ ಕಲೆಗೆ ನೂರಾರು ವೇದಿಕೆ. “ಬದಲಾವಣೆ ಜಗದ ನಿಯಮ ” ಎನ್ನುತ್ತಾರೆ. ಜೊತೆಗೆ ಮನುಷ್ಯರ ಮನಸ್ಥಿತಿಗಳು ಬದಲಾಗುವುದರಲ್ಲಿ ತಪ್ಪೇನು? ಪರಂಪರೆ ಅಳಿಯುವ ಪ್ರಶ್ನೆ ಬರುವುದು ಪ್ರೋತ್ಸಾಹ ಕಡಿಮೆ ಆದಾಗ, ಹೊಸ ಅನ್ವೇಷಣೆ ಅಥವಾ ಹೊಸ ಕೇಳುಗರೂ, ನೋಡುಗರು ಹೆಚ್ಚಾದಾಗ ಅಲ್ಲ.
ಕರಾವಳಿಯ ಗಂಡು ಕಲೆ ಯಕ್ಷಗಾನ ಎಂದು ಎದೆ ಬಿರಿದು ಹೇಳುತ್ತೇವೆ ತುಳುನಾಡಿನ ಯಕ್ಷಗಾನಸಕ್ತರು. ಇಂದು ಇದೇ ಯಕ್ಷ ರಸಿಕರು ಕರ್ನಾಟಕ ಕರಾವಳಿಯಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಆಸಕ್ತಿಯ ಕಿಚ್ಚು ಹಚ್ಚಿದ್ದಾರೆ. ಇದರಲ್ಲಿ ಕಲಾವಿದರ, ಕಲಾಪೋಷಕರ ಶ್ರಮವೂ ಅಪಾರ ಇದೆ. ಇತ್ತೀಚಿಗೆ ಟಿವಿ, ರೇಡಿಯೋ ಮಾಧ್ಯಮಗಳಲ್ಲಿ ವಿಭಿನ್ನತೆಯ ಪ್ರಸ್ತುತಿ, ಜನರಿಗೆ ಮಾಹಿತಿ, ಮನರಂಜನೆ ಮತ್ತು ಸರಳತೆಯ ಜೀವನ ಮೌಲ್ಯ ಕೊಡುವಲ್ಲಿ ಯಶಸ್ವಿಯಾಗಿದೆ. ಈ ಪ್ರಯತ್ನಕ್ಕೆ ದಾರಿ ದೀಪವಾದ ಕಲಾವಿದರ ಹೊಸ ಪ್ರಯತ್ನಗಳ ಬಗೆಗೆ ಜಿಜ್ಞಾಸೆ ಹುಟ್ಟಿಕೊಂಡ ರೀತಿಗೆ ಖೇದವಿದೆ.
ಯಕ್ಷತೆಲಿಕೆ, ಹಾಸ್ಯವೈಭವಗಳಂತಹ ರಂಗವೇದಿಕೆಯಲ್ಲಿಯ ಪ್ರಯತ್ನಗಳು, ಮಾಧ್ಯಮ ಪ್ರಸರಣಿಕೆಯಲ್ಲಿ ಎಲ್ಲಾ ವಯೋಮಾನದ ಜನ ಆಕರ್ಷಣೆಯಲ್ಲಿ ಯಶಸ್ವಿಯಾದ ಬಗೆ ಉಲ್ಲೇಖನೀಯವೆ. ಪಂಚತಂತ್ರದ ಕಥೆಗಳು, ಹಳ್ಳಿಯ ಜನಪದ ಕಥೆಗಳು ಹಾಸ್ಯ ಪ್ರಸಂಗವಾಗಿ ಮಾರ್ಪಟ್ಟು ಹಾಸ್ಯ ಕಲಾವಿದರ ಹಾಸ್ಯ ಮಾತುಗಳನ್ನು ಜನರು ಒಪ್ಪಿದ್ದರಿಂದಲೇ “ಯಕ್ಷತೆಲಿಕೆ”ಗೆ ಜನರು ಮಾಧ್ಯಮಗಳ ಮುಂದೆ ಸಮಯ ಕಾಪಿಟ್ಟು ಕುಳಿತುಕೊಳ್ಳುವುದು.
ಮಧ್ಯಾಹ್ನ, ಸಂಜೆ ದಣಿದ ಹೃದಯಗಳು ತನ್ನ ಕಾರ್ಯಕ್ಷೇತ್ರದಲ್ಲೇ ಮೊಬೈಲ್ಗಳಲ್ಲೇ ವೀಕ್ಷಿಸಿ ನಗುವಿನಲ್ಲಿ ಮನದ ನೋವ ಅರೆ ಕ್ಷಣ ಮರೆವುದು ಸಾಧ್ಯವಾಗಿದೆ. ಹತ್ತಿರದಿಂದ ಬಲ್ಲವರಲ್ಲದ ಕಲಾವಿದರಾದ ಬಂಗಾಡಿ, ಕೋಡಪದವು, ಕಡಬ, ಗುರುವಾಯನಕೆರೆ, ಹೀಗೆ ಹಲವು ಕಲಾವಿದರ ಸಂಭಾಷಣೆ ಸಾಮಾನ್ಯ ಜನರ ಬಾಯಲ್ಲಿ ಹರಿದಾಡುವುದು. ಅಲ್ಲಿನ ಹಾಸ್ಯ ಚಟಾಕಿಗಳು ಯಾರಿಗೂ ನೋವುಣಿಸಲಿಲ್ಲ, ಅನೀತಿಯ ಉಪದೇಶವಾಗಿ ಸ್ವೀಕರಿಸಲ್ಪಟ್ಟಿಲ್ಲ. ದಿವಂಗತ. ಪುಲಿಂಚ ರಾಮಯ್ಯ ರೈಗಳ “ಉಳಿ ಬಾಜಿದ ಕತೆ ” ನನ್ನಂತೆ ಇನ್ನೂ ಹಲವರ ಬಾಯಲ್ಲಿ ಮಾರ್ದನಿಸುವ ಧ್ವನಿಮುದ್ರಿಕೆ. ಆದರೆ ಅದನ್ನು ಯಕ್ಷ ರಸಿಕರು ಒಳ್ಳೆಯ ಮನಸಿನಲ್ಲೇ ಸ್ವೀಕರಿಸಿದ್ದಾರೆ. ಪರಂಪರೆಯ ಊನತೆ ಎಂಬೆಲ್ಲಾ ವೈಚಾರಿಕತೆಯ ಬುದ್ದಿವಂತಿಕೆಗೆ ಮಣೆ ಹಾಕಲಿಲ್ಲ ನಮ್ಮವರು. ಹಿಂದಿನಿಂದಲೇ ರಾತ್ರಿ ಇಡೀ ನಡೆಯುತ್ತಿದ್ದ ಬಯಲಾಟಗಳ ಹಾಸ್ಯರಸಗಳಲ್ಲಿ ಅಲ್ಲಲ್ಲಿ ಇದೇ ರೀತಿಯ ಪ್ರಸ್ತುತಿ ಹೊಸತೇನು ಅಲ್ಲ.” ಆಟದೊಳಗಿನ ಆಟ” ಹೇಗಿತ್ತು? ಊಹಿಸಿಕೊಳ್ಳಿ. ಯಕ್ಷಗಾನ ಎಲ್ಲವನ್ನೂ ಮೇಲೈಸಿ ಬಂದು ಸಾಮಾಜಿಕ ಮನ್ನಣೆ ಪಡೆದುದು. “ಅಜ್ಜ ನೆಟ್ಟ ಆಲದ ಮರ”ದ ಹಾಗೆ ಪಾತ್ರದ ಪ್ರಸ್ತುತಿಯು ಹಿಂದಿನ ಅದ್ಭುತ ಕಲಾವಿದರ ಮಾತು, ನಾಟ್ಯದ ಹಾಗೆ ಇರಬೇಕೆಂದು ಪ್ರೇಕ್ಷಕ ಬಯಸುವುದು ಎಷ್ಟು ಸರಿ? *ಆಧುನಿಕ ಪರಿಸ್ಥಿತಿಗೆ ಪ್ರಸಂಗ, ಪುರಾಣಕ್ಕೆ ಚ್ಯುತಿ ಬಾರದಂತೆ ಮೂಡಿಸುವುದರಲ್ಲಿ ತಪ್ಪೇನಿದೆ? ನಟನೆಯಲ್ಲಿ ಅನುಕರಣೆಗಿಂತ ಅನುಸರಣೆ ಒಳ್ಳೇದಲ್ವೆ? ಅಂದಿನ “ಪಾಪಣ್ಣ” ಮತ್ತೆ ಬರುವುದಕ್ಕಿಲ್ಲ… ಅದಕ್ಕೆ ಅದೇ ಸಾಟಿ. ಆದರೆ ಪ್ರಸ್ತುತ ಅದೇ ಪಾತ್ರಕ್ಕೆ ಜೀವ ಕೊಡುವ ಯುವ ಮನಸ್ಸು ಅಲ್ಲೋ ಇಲ್ಲೋ ಬದಲಾವಣೆ ತಂದರೆ ಲೋಪ ಕಾಣುವುದು ಎಷ್ಟು ಸಮಂಜಸ.
ಕೆಲವೊಮ್ಮೆ ಅನಿಸುವುದುಂಟು ಈಗೀಗ ಸ್ವಚ್ಛ ಯಕ್ಷಗಾನ ಪ್ರಪಂಚದಲ್ಲೂ ಉಳಿದ ಕ್ಷೇತ್ರದಲ್ಲಿದ್ದಂತೆ ಮತ್ಸರ, ಕಾಲೆಳೆಯುವ ಯತ್ನ, ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ಯತ್ನಗಳು, ಕಲಾವಿದರೊಳಗಿನ ವೈಮನಸ್ಸು ಸ್ನೇಹಮಯ ಯಕ್ಷ ಬದುಕಿನೊಳಗೆ ಬಿರುಕು ಹುಟ್ಟಿಸುತ್ತಿದೆಯಾ? ಚೌಕಿಯೊಳಗೆ ಬಗೆಹರಿಯುತಿದ್ದ ಕಲಾವಿದರ ಕಾಳಗ ಯಕ್ಷ ಪ್ರೇಕ್ಷಕನ ಮನದೊಳಗೆ ನುಗ್ಗಿ ಕಲಾವಿದರ ಪ್ರಸಂಗವಾಗಿ ಮಾರ್ಪಡುತ್ತಿದೆಯಾ? ಕಾನೂನು ಕಟ್ಟಲೆಯ ಮೆಟ್ಟಿಲೇರುತಿದೆಯ? ಹೊಸ ಅನ್ವೇಷಣೆಗೆ ತೊಡಗಿದ ಕಲಾ ಪೋಷಕರು, ಅದೇ ಕ್ಷೇತ್ರದಲ್ಲಿ ವ್ಯವಸಾಯ ಮಾಡುವ ಕಲಾವಿದರು – ಹಣದಾಹಕ್ಕೋ, ಸಹಕಲಾವಿದನ ಮೇಲಿನ ಮತ್ಸರದಿಂದಲೋ ಸೇಡನ್ನು ತೀರಿಸುತಿದ್ದಾರೋ ಅರ್ಥವಾಗುತ್ತಿಲ್ಲ. ಕಲಾವಿದರೆ ನೀವೆಲ್ಲ ಜೊತೆಯಾಗಿ ಇದ್ದು ಯಕ್ಷ ಸೇವೆ ಮಾಡಿ, ಯಕ್ಷ ಸಂಪತ್ತನ್ನು ಬೆಳೆಸಿಕೊಳ್ಳಿ ಎಂಬುದೇ ನಮ್ಮ ಆಶಯ. ಯಕ್ಷ ನಗು… ನಗುನಗುತ ಸಾಗಲಿ ನಿಮ್ಮ ಜತೆ ನಾವಿದ್ದೇವೆ.
🖊️ರಾಧಾಕೃಷ್ಣ ಎರುಂಬು