ಪುತ್ತೂರು: ಅಭಿಷೇಕ್ ಎಂಬವರ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಪಾಂಬಾರು ಪ್ರದೀಪ್ ರೈ ಹಲ್ಲೆ ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ನಗರದಿಂದ ಮುರಕ್ಕೆ ಸಂಚರಿಸುವ ಮಾರ್ಗ ಮಧ್ಯೆ ಇರುವ, ಪುತ್ತೂರು ಟಿಂಬರ್ ಶಾಪ್ ಹತ್ತಿರ ಅಭಿಷೇಕ್ ನಿಂತಿದ್ದ ಸಂದರ್ಭದಲ್ಲಿ, ಪ್ರದೀಪ್ ರೈ ಅತೀ ವೇಗವಾಗಿ ಕಾರು ಚಲಾಯಿಸುತ್ತಾ ರಸ್ತೆ ಪಕ್ಕ ನಿಂತಿದ್ದ ಅಭಿಷೇಕ್ ಹತ್ತಿರ ಕಾರು ನಿಲ್ಲಿಸಿ ಅನಾವಶ್ಯಕವಾಗಿ ಬೈದು ಹಲ್ಲೆ ಮಾಡಿದ್ದಾನೆ. ‘ನಮ್ಮದೇ ಸರ್ಕಾರ ಇರೋದು, ಏನು ಬೇಕಾದ್ರೂ ಮಾಡ್ತೇವೆ, ನಿನ್ನನ್ನು ಸುಮ್ಮನೇ ಬಿಡೋದಿಲ್ಲ’ ಎಂದು ಬೆದರಿಕೆ ಹಾಕಿ ಸಾಯಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಭಯಗೊಂಡ ಅಭಿಷೇಕ್ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಚಾರವನ್ನು ತಿಳಿಸುತ್ತಿದ್ದಂತೆ ಸ್ಧಳದಿಂದ ಪ್ರದೀಪ್ ಕಾಲ್ಕಿತ್ತಿದ್ದಾನೆ. ಬಳಿಕ ಪುತ್ತೂರಿನ ಬೊಳುವಾರು ಬೈಪಾಸ್ನಲ್ಲಿ ಅಭಿಷೇಕ್ ಸ್ನೇಹಿತರು, ಪ್ರದೀಪ್ ರೈನನ್ನು ಅಡ್ಡ ಹಾಕಿ ಜೀವ ಬೆದರಿಕೆ ಹಾಕಿದ ವಿಚಾರವನ್ನು ಪ್ರಶ್ನಸಿದ್ದಾರೆ. ಈ ವೇಳೆ ಪ್ರದೀಪ್ ಗೂಂಡಾಗಿರಿ ಪ್ರದರ್ಶಿಸಿದ್ದು, ಇದರ ನಂತರ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ.
ಪ್ರದೀಪ್ ನಡೆಸಿದ ಹಲ್ಲೆಯಿಂದ ಗಾಯಗೊಂಡ ಅಭಿಷೇಕ್ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಎಲ್ಲಾ ವಿಚಾರ ತಿಳಿಯುತ್ತಿದ್ದಂತೆ ಪ್ರದೀಪ್ ರೈ ಸುಳ್ಳು ಸುದ್ದಿ ಹಬ್ಬಿಸಿ ತನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇವರು ಕೂಡ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.