ಮಡಿಕೇರಿ : ಕೊಡಗಿನ ಕುಲದೇವತೆ ಮಾತೆ ಕಾವೇರಿ ತುಲಾ ಸಂಕ್ರಮಣದಂದು ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ. ಈ ವೇಳೆ ಲಕ್ಷಾಂತರ ಭಕ್ತರು ತಲಕಾವೇರಿಗೆ ಭೇಟಿ ನೀಡಿ ಪುಷ್ಕರಿಣಿಯಲ್ಲಿ ಮಿಂದು ಪಾವನವಾಗುವುದು ವಾಡಿಕೆ. ಆದರೆ ಈ ಬಾರಿ ತಲಕಾವೇರಿಗೆ ಆಗಮಿಸಬೇಕಾದರೆ ಕೋವಿಡ್ ಫ್ರೀ ಎಂಬ ಸರ್ಟಿಫಿಕೆಟ್ ಇದ್ದರೆ ಮಾತ್ರ ದೇವಾಲಯದ ಒಳ ಪ್ರವೇಶಕ್ಕೆ ಅವಕಾಶವಿರುತ್ತದೆ.
ಅಕ್ಟೋಬರ್ 17 ರಂದು ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಲಿದ್ದಾಳೆ. ಈ ಸಂದರ್ಭದಲ್ಲಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡು, ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳಲು ಲಕ್ಷಾಂತರ ಜನರು ಬರುತ್ತಾರೆ. ಆದರೆ ಈ ಬಾರಿ ಕೊರೋನಾ ಮಹಾಮಾರಿ ಇರುವುದರಿಂದ ಎಲ್ಲಾರಿಗೂ ತಲಕಾವೇರಿಗೆ ಬರಲು ಅವಕಾಶವಿಲ್ಲ.
ಶನಿವಾರ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರ ನೇತೃತ್ವದಲ್ಲಿ ಕಾವೇರಿ ತೀರ್ಥೋದ್ಭವ ಮತ್ತು ತುಲಾಸಂಕ್ರಮಣ ಜಾತ್ರಾ ಮಹೋತ್ಸವದ ಸಿದ್ಧತಾ ಪೂರ್ವಾಭಾವಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ತಲಕಾವೇರಿ ಮತ್ತು ಬಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.
ತೀರ್ಥೋದ್ಭಕ್ಕೆ ರಾಜ್ಯ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಆದರೆ ಹೀಗೆ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳಿಂದ ಬರುವವರು ಗಂಟಲು ದ್ರವ ಪರೀಕ್ಷಿಸಿಕೊಂಡು ಕೋವಿಡ್ ಮುಕ್ತರಾಗಿದ್ದೇವೆ ಎಂದು ವೈದ್ಯರಿಂದ ಸರ್ಟಿಫಿಕೇಟ್ ತಂದರೆ ಮಾತ್ರವೇ ತಲಕಾವೇರಿಗೆ ಎಂಟ್ರಿಕೊಡಲಾಗುವುದು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದು ನಿರ್ಧರಿಸಲಾಯಿತು.
ಇನ್ನು ತೀರ್ಥೋದ್ಭವದ ಬಳಿಕ ತೀರ್ಥಸ್ನಾನ ಮಾಡುವಂತಿಲ್ಲ ಎಂದು ತೀರ್ಮಾನಿಸಲಾಗಿದೆ. ಜೊತೆಗೆ ಪ್ರತೀ ವರ್ಷ ತೀರ್ಥೋದ್ಭವಕ್ಕೆ ಬರುತ್ತಿದ್ದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತಿತ್ತು. ಕೊರೋನಾ ಇರುವುದರಿಂದ ಅದಕ್ಕೂ ಅವಕಾಶವಿರುವುದಿಲ್ಲ.