



ರಾಮನಗರ: ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಕನಕಪುರ ತಾಲೂಕಿನ ಗೆಂಡೆಕೆರೆ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.ತುಂಗಣಿ ಗ್ರಾಮದ ಸುನಿಲ್ (27) ಕೊಲೆಯಾದ ಯುವಕ.ಪಾರ್ಥಸಾರಥಿ ಹಾಗೂ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.ಜಮೀನು ವಿಚಾರಕ್ಕೆ ಸುನೀಲ್ ಹಾಗೂ ಪಾರ್ಥಸಾರಥಿ ಕುಟುಂಬದ ನಡುವೆ ಗಲಾಟೆ ನಡೆದಿದ್ದು, ಸುನೀಲ್ ತಂದೆಯಿಂದ ಪಾರ್ಥಸಾರಥಿ ಆಸ್ತಿ ಬರೆಸಿಕೊಂಡ ಆರೋಪವಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡದೇ 2 ಎಕರೆ ಜಮೀನು ಕರೆಸಿಕೊಂಡಿದ್ದಾರೆ ಎಂದು ಗಲಾಟೆ ಆರಂಭವಾಗಿದೆ.
ಸುನೀಲ್ ಹಾಗೂ ಸಹೋದರ ಕಿರಣ್ ಅವರು ಪಾರ್ಥಸಾರಥಿ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ ವೇಳೆ ವಿಕೋಪಕ್ಕೆ ತಿರುಗಿ ಸುನೀಲ್ ಮೇಲೆ ಪಾರ್ಥಸಾರಥಿ ಹಾಗೂ ಸ್ನೇಹಿತರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.ಗಂಭೀರ ಗಾಯಗೊಂಡ ಸುನೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಹೋದರರ ಕಿರಣ್ ಗೂ ಸಣ್ಣಪುಟ್ಟ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.








