ವಿಟ್ಲ: ಕೊವಿಡ್ ೧೯ ನೆಪದಲ್ಲಿ ಈಗ ವಿದ್ಯುತ್ ಗ್ರಾಹಕರಿಗೆ ಬೇಕಾಬಿಟ್ಟಿ ಬಿಲ್ ನೀಡಲಾಗುತ್ತಿದೆ. ಇನ್ನು ಖಾಸಗೀಕರಣವಾದರೆ ಗ್ರಾಹಕರಿಗೆ ಪ್ರಶ್ನಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಬಸ್ ಸೇವೆ ಖಾಸಗೀಕರಣ ಮಾಡಿರುವುದರಿಂದ ಪ್ರಯಾಣಿಕರು ಹಬ್ಬದ ಸಮಯದಲ್ಲಿ ದುಪ್ಪಟ್ಟು ದರ ನೀಡಿ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.
ವಿಟ್ಲ ಪ್ರಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೆಸ್ಕಾಂ ಸೇರಿ ಎಲ್ಲಾ ವಿದ್ಯುತ್ ಪ್ರಸರಣ ನಿಗಮವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ನಿರ್ಧಾರ ರೈತರ ಪಾಲಿಗೆ ಶಾಪಗ್ರಸ್ತವಾಗಲಿದೆ. ಈ ನಿರ್ಣಯವನ್ನು ರೈತ ಸಂಘ ಖಂಡಿಸುತ್ತದೆ ಮತ್ತು ಈ ನಿರ್ಧಾರವನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಹಲವು ವರ್ಷಗಳಿಂದ ಸರ್ಕಾರ ರೈತರಿಗೆ ಹತ್ತು ಅಶ್ವಶಕ್ತಿಯ ವರೆಗಿನ ಪಂಪ್ ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡುವ ಕಾರ್ಯವನ್ನು ಮಾಡುತ್ತಿದೆ. ಆದರೆ ವಿದ್ಯುತ್ ಪ್ರಸರಣ ನಿಗಮ ಖಾಸಗೀಕರಣವಾದಲ್ಲಿ ರೈತರು ಇಂತಹ ಯೋಜನೆಗಳಿಂದಲೂ ವಂಚಿತರಾಗುವುದರಲ್ಲಿ ಅನುಮಾನವಿಲ್ಲ. ವಿವಿಧ ಸಮಸ್ಯೆಗಳಿಂದ ನಲುಗುತ್ತಿರುವ ರೈತನಿಗೆ ಈ ನಿರ್ಣಯದಿಂದ ಅನ್ಯಾಯವಾಗಲಿದೆ. ರೈತಾಪಿ ವರ್ಗ ಹಾಗೂ ವಿದ್ಯುತ್ ಗ್ರಾಹಕರು ಈ ಕರಾಳ ನಿರ್ಣಯವನ್ನು ವಿರೋಧಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುದೀಶ್ ಮೈಯ್ಯ, ವಿಟ್ಲ ಸಮಿತಿ ಕಾರ್ಯದರ್ಶಿ ಸುದೀಶ್ ಭಂಡಾರಿ ಉಪಸ್ಥಿತರಿದ್ದರು.