ಬಂಟ್ವಾಳ: ಎನ್.ಐ.ಎ.ಪೋಲೀಸರು ಮತ್ತೆ ದ.ಕ.ಜಿಲ್ಲೆಯಲ್ಲಿ ಬೇಟೆಯಾಡಿದ್ದು ಒಟ್ಟು 5 ಮಂದಿಯ ಮನೆಗಳಿಗೆ ಇಂದು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮೇಲ್ಕಾರಿನ ಬೋಗೊಡಿ ನಿವಾಸಿ ಇಬ್ರಾಹಿಂ ನಂದಾವರ, ವಳಚ್ಚಿಲ್ ಪದವಿನ ಮುಸ್ತಾಕ್ ಹಾಗೂ ಕಿನ್ಯಾದ ಇಬ್ರಾಹಿಂ ಎಂಬವರ ಮನೆ, ಬೆಂಬಲಿಗರ ಮನೆಗಳ ಮೇಲೆ NIA ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಆದರೆ ದಾಳಿಯ ವೇಳೆ ಆ ಮೂವರು ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.
ಉಳ್ಳಾಲ ಕಿನ್ಯಾದ ಇಬ್ರಾಹಿಂ ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಪಿಎಫೈ ನಿಷೇಧದ ಬಳಿಕ ತಲೆ ಮರೆಸಿಕೊಂಡಿದ್ದಾನೆ. ಮೆಲ್ಕಾರಿನ ಇಬ್ರಾಹಿಂ ನಂದಾವರ ಕ್ಯಾಬ್ ಡ್ರೈವರ್ ಎಂದು ಹೇಳಲಾಗಿದೆ.
ಕೆಲ ಸಮಯದ ಹಿಂದೆ ಎನ್ಐಎ, ನಿಷೇಧಿತ ಪಿಎಫ್ಐ ಸಂಘಟನೆಯ ಫಂಡಿಂಗ್ ನೆಟ್ವರ್ಕ್ ಅನ್ನು ಬೇಧಿಸಿತ್ತು. ಈ ವೇಳೆ ಬಂಧಿತರನ್ನು ವಿಚಾರಣೆ ನಡೆಸಿದಾಗ ಇಬ್ರಾಹಿಂ ಹೆಸರು ಪ್ರಸ್ತಾಪವಾಗಿತ್ತು. ಪಿಎಫ್ಐ ಫಂಡಿಂಗ್ ನೆಟ್ವರ್ಕ್ ಗೆ ಇಬ್ರಾಹಿಂ ಲಿಂಕ್ ಇದೆ ಎಂಬುದು ತಿಳಿದು ಬಂದಿದೆ.