


ದಾವಣಗೆರೆ: ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬಳು ಉದ್ಯಮಿಯನ್ನು ಹನಿಟ್ರ್ಯಾಪ್ಗೆ ಸಿಲುಕಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನರ್ಸ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಮತ್ತು ಚನ್ನಬಸಪ್ಪ ಎಂದು ಗುರುತಿಸಲಾಗಿದೆ.
ಉದ್ಯಮಿ ಪ್ರಭು ಅವರೊಂದಿಗೆ ಸುಶ್ಮಿತಾ ಪರಿಚಯ ಮಾಡಿಕೊಂಡಿದ್ದು, ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣದ ಸಹಾಯ ಬೇಕು ಎಂದು ಹೇಳಿ ಸಲುಗೆ ಬೆಳೆಸಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಮಾರ್ಪಟ್ಟಿತ್ತು. ಒಂದು ತಿಂಗಳ ಹಿಂದೆ ಸುಶ್ಮಿತಾ ಪ್ರಭುವನ್ನು ಸರ್ವಿಸ್ ಅಪಾರ್ಟ್ಮೆಂಟ್ಗೆ ಕರೆಯಿಸಿಕೊಂಡಿದ್ದು, ಹಲವು ಬಾರಿ ಇಬ್ಬರೂ ಅಲ್ಲಿ ಭೇಟಿಯಾಗುತ್ತಿದ್ದರು.
ಈ ಸಂದರ್ಭವನ್ನು ಬಳಸಿಕೊಂಡ ಆರೋಪಿಗಳು ಸುಶ್ಮಿತಾ ಮತ್ತು ಪ್ರಭು ಒಟ್ಟಿಗೆ ಇದ್ದ ದೃಶ್ಯವನ್ನು ರಹಸ್ಯವಾಗಿ ವೀಡಿಯೋ ಮಾಡಿದ್ದಾರೆ. ನಂತರ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಕೊನೆಗೆ ಪ್ರಭು 12 ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದು, ಆರೋಪಿಗಳ ಬೆದರಿಕೆಯಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.








