ದೆಹಲಿ: 21 ವರ್ಷದ ಯುವತಿಯ ಮೇಲೆ ಕಾಮುಕರು ಅತ್ಯಾಚಾರವೆಸಗಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆ.26ರಂದು ದೆಹಲಿಯ ಸಂಗಮ್ ವಿಹಾರ್ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ದೆಹಲಿ ನಾಗರಿಕ ರಕ್ಷಣೆ (ಡಿಸಿಡಿ) ಉದ್ಯೋಗದಲ್ಲಿದ್ದ ಯುವತಿ “ಕೆಲಸದಿಂದ ತೆರಳುವ ಸಂದರ್ಭದಲ್ಲಿ ಸಬಿಯಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ಅಪಹರಿಸಿ, ನಂತರ ಪರಿದಾಬಾದ್ಗೆ ಕರೆದೊಯ್ದು, ಅತ್ಯಾಚಾರವೆಸಗಿ ದೇಹವನ್ನು ವಿರೂಪಗೊಳಿಸಲಾಗಿದೆ, ಸ್ತನಗಳನ್ನು ಕತ್ತರಿಸಲಾಗಿದೆ’ ಎಂದು ಸಬಿಯಾ ಕುಟುಂಬ ನೋವು ತೋಡಿಕೊಂಡಿದೆ.
ಈ ಘಟನೆ ಬಳಿಕ ಸಬಿಯಾಳ ಇಬ್ಬರು ಸಹೋದ್ಯೋಗಿಗಳು ತಲೆಮರೆಸಿಕೊಂಡಿದ್ದಾರೆ. ಈ ಭೀಕರ ಕೃತ್ಯದಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಸಬಿಯಾ ಕುಟುಂಬ, “ಈ ಇಬ್ಬರ ಮೇಲೆ ದೂರು ನೀಡಲು ಸಂಗಮ್ ವಿಹಾರ್ ಪೊಲೀಸ್ ಠಾಣೆಗೆ ಹೋಗಿದ್ದ ವೇಳೆ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ’ ಎಂದು ತಿಳಿದುಬಂದಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿದ್ದು, ವೈದ್ಯಕೀಯ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ. ಸಿಬಿಐ ತನಿಖೆ ನಡೆಸುವಂತೆ ಸಬಿಯಾ ಕುಟುಂಬ ಆಗ್ರಹಿಸಿ ಒಂದು ವಾರದಿಂದ ತಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಕೃತ್ಯವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು, ಹೋರಾಟಗಾರರು ಒತ್ತಾಯಿಸಿದ್ದಾರೆ.
ಹರ್ಯಾಣದ ಫರೀದಾಬಾದ್ ಎಂಬಲ್ಲಿನ ಸೂರಜ್ ಕುಂದ್ ಪಾಲಿ ರಸ್ತೆಯಲ್ಲಿ ಶವ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿ ಆಕೆಯ ಪತಿ ಎನ್ನಲಾಗಿರುವ ನಿಜಾಮುದ್ದೀನ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ತಾನೇ ಈ ಕೃತ್ಯವನ್ನು ಎಸಗಿದ್ದಾಗಿ ಹೇಳಿದ್ದಾನೆ ಎನ್ನಲಾಗುತ್ತಿದ್ದು, ಘಟನೆಯ ಬಗ್ಗೆ ಭಾರೀ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಸೂರಜ್ ಕುಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.