ಲಂಚ ಪಡೆದ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಯೋರ್ವನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಅಂಕಿತ್ ತಿವಾರಿ ಬಂಧಿತ ಅಧಿಕಾರಿ.
ವಿಚಾರಣೆಯ ಹಂತದಲ್ಲಿರುವ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರಿ ನೌಕರನಿಂದ ಸುಮಾರು ₹ 3 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅ. 29 ರಂದು ಮೊದಲ ಬಾರಿ ಉದ್ಯೋಗಿಯನ್ನು ಸಂಪರ್ಕಿಸಿದ್ದ ಅಧಿಕಾರಿ, ತಾನು ಪ್ರಧಾನ ಮಂತ್ರಿ ಕಚೇರಿಯ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುವುದಾಗಿ ಹೇಳಿಕೊಂಡಿದ್ದ. ಮೇಲಾಧಿಕಾರಿಗಳ ಜೊತೆ ಮಾತಾಡಿ ನಿಮ್ಮ ಪ್ರಕರಣವನ್ನು ಕೈ ಬಿಡುವುದಾಗಿ ಹೇಳಿ, ಅದಕ್ಕೆ ₹ 3 ಕೋಟಿ ಹಣ ನೀಡುವಂತೆ ಕೇಳಿದ್ದ. ಕೊನೆಗೆ ಲಂಚದ ಹಣ ₹ 51 ಲಕ್ಷಕ್ಕೆ ಇಳಿಸಿದ್ದ.
ಲಂಚದ ಮೊದಲ ಕಂತು ರೂ. 20 ಲಕ್ಷವನ್ನು ನ.1 ರಂದು ಪಡೆದಿದ್ದ ಈತ ಬಾಕಿ ಉಳಿದ ₹ 31 ಲಕ್ಷಕ್ಕಾಗಿ ಸರ್ಕಾರಿ ನೌಕರನಿಗೆ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ನೌಕರ ನ. 30 ರಂದು ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಮಧುರೈನಲ್ಲಿ ಪೊಲೀಸರು ಅಂಕಿತ್ ತಿವಾರಿಯನ್ನು ಬಂಧಿಸಿದ್ದಾರೆ. ಆತನ ಮನೆ ಹಾಗೂ ಇಡಿ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಅಂಕಿತ್ ತಿವಾರಿಯನ್ನು ಡಿ. 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಕುರಿತು ಜಾರಿ ನಿರ್ದೇಶನಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.