ಮುಂಬೈನಿಂದ ಕೇಂದ್ರ ಸರ್ಕಾರಿ ನಿಯೋಜನೆಯ ಮೇಲೆ ದೆಹಲಿಗೆ….!



ಕನ್ನಡಿಗ ಹಿರಿಯ ಪೊಲೀಸ್ ಅಧಿಕಾರಿ ದಯಾ ನಾಯಕ್, ‘ಎನ್ಕೌಂಟರ್ ಸ್ಪೆಷಲಿಸ್ಟ್ ಎಂದು ಖ್ಯಾತರಾಗಿದ್ದವರು, ಜುಲೈ 31, 2025ರಂದು ಮುಂಬೈ ಪೊಲೀಸ್ ಸೇವೆಯಿಂದ ನಿವೃತ್ತರಾಗಲಿದ್ದಾರೆ. ನಿವೃತ್ತಿಗೆ ಎರಡು ದಿನ ಮೊದಲು ಮಹಾರಾಷ್ಟ್ರ ಸರ್ಕಾರ ಅವರಿಗೆ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಹುದ್ದೆಗೆ ಬಡ್ತಿ ನೀಡಿದೆ.
ತಮ್ಮ ಜಾಲತಾಣದಲ್ಲಿ ದಯಾ ನಾಯಕ್ ಬರೆದುಕೊಂಡಿದ್ದಾರೆ: “ಮೊದಲ ಬಾರಿಗೆ ಎಸಿಪಿ ಸಮವಸ್ತ್ರ ಧರಿಸಿದ್ದೇನೆ, ಶಾಶ್ವತವಾಗಿ ತೊರೆಯುವ ಒಂದು ದಿನ ಮೊದಲು. ಇದು ಕೇವಲ ಬಡ್ತಿಯಲ್ಲ, ಜೀವನಪೂರ್ತಿ ಕರ್ತವ್ಯ, ಶಿಸ್ತು ಮತ್ತು ಸಮರ್ಪಣೆಗೆ ಸಿಕ್ಕ ಗೌರವ.”
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆ ಹೊಳೆಯವರಾದ ದಯಾ ನಾಯಕ್, 1979ರಲ್ಲಿ ಆರ್ಥಿಕ ಸಂಕಷ್ಟದಿಂದ ಮುಂಬೈಗೆ ಸ್ಥಳಾಂತರಗೊಂಡರು. ಪ್ಲಂಬರ್, ಕ್ಯಾಂಟೀನ್ ಕೆಲಸಗಳ ಮೂಲಕ ಜೀವನ ಆರಂಭಿಸಿ, ಓದಿನ ಜೊತೆಗೆ 1995ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದರು. ಮೂರು ದಶಕಗಳ ಸುದೀರ್ಘ ಸೇವೆಯಲ್ಲಿ 87 ಗ್ಯಾಂಗ್ಸ್ಟರ್ಗಳನ್ನು ಎನ್ಕೌಂಟರ್ನಲ್ಲಿ ಕೊಂದು, ದಾವೂದ್ ಇಬ್ರಾಹಿಂ, ಛೋಟಾ ರಾಜನ್ ಸೇರಿದಂತೆ ದೊಡ್ಡ ಪಾತಕಿಗಳಿಗೆ ಗುಂಡಿನ ಮೂಲಕ ಬಿಸಿಮುಟ್ಟಿಸಿದರು.
ಮುಂಬೈ ಅಪರಾಧ ವಿಭಾಗದ ಯೂನಿಟ್ 9ರ ಮುಖ್ಯಸ್ಥರಾಗಿ, ಸಲ್ಮಾನ್ ಖಾನ್ ನಿವಾಸದ ಮೇಲಿನ ಗುಂಡಿನ ದಾಳಿ, ಬಾಬಾ ಸಿದ್ದಿಕಿ ಹತ್ಯೆ,ಸೈಫ್ ಅಲಿಖಾನ್ ದಾಳಿ ಪ್ರಕರಣ ಸೇರಿ ಹಲವು ಪ್ರಮುಖ ಕೇಸ್ಗಳನ್ನು ನಿಭಾಯಿಸಿದರು.
2006ರಲ್ಲಿ ಭ್ರಷ್ಟಾಚಾರ ಆರೋಪದಿಂದ ಅಮಾನತುಗೊಂಡಿದ್ದ ದಯಾ, ಸುಪ್ರೀಂ ಕೋರ್ಟ್ ಆರೋಪ ರದ್ದುಗೊಳಿಸಿದ ನಂತರ 2012ರಲ್ಲಿ ಸೇವೆಗೆ ಮರಳಿದರು.
ದಯಾ ನಾಯಕ್ ಜೀವನಾಧಾರಿತ ಬಾಲಿವುಡ್ನ ‘ಅಬ್ ತಕ್ ಛಪ್ಪನ್’, ‘ಡಿಪಾರ್ಟ್ ಮೆಂಟ್ ಮತ್ತು ಕನ್ನಡದ ‘ಎನ್ಕೌಂಟರ್ ದಯಾ ನಾಯಕ್ ಚಿತ್ರಗಳು ಬಿಡುಗಡೆಯಾದವು.
ತಮ್ಮ ಹುಟ್ಟೂರಿನಲ್ಲಿ ತಾಯಿ ರಾಧಾ ನಾಯಕ್ ಟ್ರಸ್ಟ್ ಮೂಲಕ ಶಾಲೆ ಸ್ಥಾಪಿಸಿ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.








